219 ಗ್ರಾಮಗಳ ಸ್ಥಳಾಂತರ : ಯಡಿಯೂರಪ್ಪ
ಯರಮರಸ್ (ರಾಯಚೂರು), ಅ. 11 : ನೆರೆಯಿಂದ ಪದೇಪದೇ ಮುಳುಗಡೆ ಎದುರಿಸುತ್ತಿರುವ ರಾಜ್ಯ 219 ಗ್ರಾಮಗಳ ಸ್ಥಳಾಂತರ ಕಾರ್ಯವನ್ನು ಸರಕಾರ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಯರಮರಸ್ ಹೆಲಿಪ್ಯಾಡ್ ಗೆ ಹೊಂದಿಕೊಂಡಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶನಿವಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ವಾಪಾಸಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಷಯ ಸ್ಪಷ್ಟಪಡಿಸಿದರು. ತಕ್ಷಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗುವುದಾಗಿ ಹೇಳಿದರು.
ಈ ಮೂಲಕ 75 ಸಾವಿರ ಕುಟುಂಬಗಳಿಗೆ ಮನೆ ನಿರ್ಮಿಸುವ ಹೊಣೆಯನ್ನು ಸವಾಲಾಗಿ ಸ್ವೀಕರಿಸಿದೆ. ಇದಕ್ಕೆ ಬೇಕಾದ ಜಮೀನನ್ನು ಕೆಲವೇ ದಿನಗಳಲ್ಲಿ ಸ್ವಾಧೀನಪಡಿಸಿಕೊಂಡು ಬಡಾವಣೆಯ ನೀಲನಕ್ಷೆ ಸಿದ್ಧಪಡಿಸಲಾಗುವುದು. ಜೊತೆಗೆ ನಿರ್ಮಾಣ ಕಾರ್ಯವನ್ನೂ ಆರಂಭಿಸಲಾಗುವುದು ಎಂದರು. ಸೋಮವಾರ ಉನ್ನತ ಅಧಿಕಾರಿಗಳ ಜೊತೆ ಕೂಲಂಕಷವಾಗಿ ಚರ್ಚಿಸಲಾಗುವುದು. ಈ ತಿಂಗಳ 14ರ ನಂತರ 8-10 ದಿನಗಳ ಮಟ್ಟಿಗೆ ಪ್ರವಾಹಪೀಡಿತ ತಾಲ್ಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ನೆರೆಬಾಧೆಗೆ ಒಳಗಾದ ಪ್ರತಿ ಗ್ರಾಮದಲ್ಲಿ 3-4 ತಾಸು ಕುಳಿತು ವಸ್ತುಸ್ಥಿತಿಯನ್ನು ಅವಲೋಕಿಸುತ್ತೇನೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications