ರಂಗನಾಥ್ , ಹಮೀದ್ ಟಿವಿ9ಗೆ ಗುಡ್ ಬೈ
ಬ್ರೇಕಿಂಗ್ ನ್ಯೂಸ್ ಖ್ಯಾತಿಯ "ಉತ್ತಮ ಸಮಾಜಕ್ಕಾಗಿ" ಘೋಷವಾಕ್ಯದ ಟಿವಿ9 ವಾಹಿನಿಯಲ್ಲಿ ಪಳಗಿ ಪ್ರೇಕ್ಷಕರಿಗೆ ಚಿರಪರಿಚಿತವಾದ ಈ ಎರಡು ಮುಖಗಳು ಇನ್ನು ಮುಂದೆ ಸುದ್ಧಿಸ್ಫೋಟ ಖ್ಯಾತಿಯ "ನೇರ ದಿಟ್ಟ ನಿರಂತರ" ಘೋಷವಾಕ್ಯದ ಸುವರ್ಣ ಸುದ್ದಿ ತೆರೆಯ ಮೇಲೆ ಕಾಣಿಸಿಕೊಳ್ಳಲಿವೆ. ವೃತ್ತಿ ಆಕಾಂಕ್ಷೆಗಳ ಬೆಂಬತ್ತಿ ಪ್ರತಿಸ್ಪರ್ಧಿ ಕನ್ನಡ ವಾಹಿನಿಯತ್ತ ಇವರಿಬ್ಬರು ಮುಖ ಮಾಡಿದ್ದಾರೆ.
ವಿಶ್ವಸನೀಯ ಮೂಲಗಳ ಪ್ರಕಾರ ರಂಗನಾಥ ಮತ್ತು ಹಮೀದ್ ಈಗಾಗಲೇ ಟಿವಿ9ಕ್ಕೆ ತಮ್ಮ ರಾಜಿನಾಮೆಗಳನ್ನು ಕೊಟ್ಟಿದ್ದಾರೆ. ಸುವರ್ಣ ಚಾನಲ್ಲಿಗೆ ಅವರಿಬ್ಬರು ನೌಕರರಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ ಕೂಡ. ಆದರೆ, ಇವರನ್ನು ಸುವರ್ಣ ತೆರೆಯ ಮೇಲೆ ನೋಡಲು ಪ್ರೇಕ್ಷಕರು ನವೆಂಬರ್ 1ರ ತನಕ ಕಾಯಬೇಕಾಗುವುದು.
ಹೆಚ್ಚುವರಿ ಬಂಡವಾಳ ಹಾಕಿ, ಹೆಚ್ಚುವರಿ ನೌಕರವರ್ಗವನ್ನು ತೊಡಗಿಸಿ ಬಹುಕೋಟಿ ಪ್ರೇಕ್ಷಕರನ್ನು ತಲುಪುವ ವಾಣಿಜ್ಯ ಉತ್ಸಾಹದಿಂದ ಚಾನಲ್ ವಿಸ್ತರಣೆಗೆ ಸುವರ್ಣ ಆಡಳಿತ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಇದೇ ನವೆಂಬರ್ 1 ರ ರಾಜ್ಯೋತ್ಸವ ದಿನದಂದು ಸುವರ್ಣ ವಾಹಿನಿಯನ್ನು ಪುನಃ ಆರಂಭಿಸುವ (Relaunch) ಯೋಜನೆ ಪಕ್ಕಾ ಆಗಿದೆ. 53 ನೇ ಕನ್ನಡ ರಾಜ್ಯೋತ್ಸವದ ಸುದ್ದಿ ಸಮಾಚಾರಗಳನ್ನು ಪ್ರೇಕ್ಷಕರಿಗೆ ತಲುಪಿಸುವುದರೊಂದಿಗೆ ರಂಗನಾಥ ಮತ್ತು ಹಮೀದ್ ಅವರ ಸುವರ್ಣ ಅಧ್ಯಾಯ ಆರಂಭಗೊಳ್ಳುತ್ತದೆ.
(ದಟ್ಸ್ ಕನ್ನಡ ವಾರ್ತೆ)