ವಿಧಾನಸೌಧ ದಿಗ್ಬಂಧನ ಯಶಸ್ವಿ: ದೇಶಪಾಂಡೆ

ಮೂಲಭೂತ ಸೌಲಭ್ಯಗಳಿಲ್ಲದ ಸಿಎಆರ್ ಮೈದಾನದ ನಾಯಿ ಶೆಡ್ ನಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಮಹಿಳಾ ಶಾಸಕರು ಹಾಗೂ ಪಕ್ಷದ ಹಿರಿಯ ಮುಖಂಡರನ್ನು ಕೂಡಿಹಾಕಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ದೇಶಪಾಂಡೆ ಅವರು ಬಿಜೆಪಿ ಸರಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ದಬ್ಬಾಳಿಕೆ ಮೂಲಕ ಯುದ್ಧದ ವಾತಾವರಣ ನಿರ್ಮಾಣ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಪೊಲೀಸ್ ಆಯುಕ್ತ ಶಂಕರ ಬಿದರಿಯವರು ವಿನಂತಿಸಿಕೊಂಡ ಕಾರಣ ನಿನ್ನೆ ರಾತ್ರಿ ಧರಣಿಯನ್ನು ಕಾಂಗ್ರೆಸ್ ಪಕ್ಷ ಹಿಂತೆಗೆದುಕೊಂಡಿತು ಎಂದು ದೇಶಪಾಂಡೆ ತಿಳಿಸಿದರು.
ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟಿಸಲು ವಿಧಾನಸೌಧ ದಿಗ್ಭಂದನ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಪೊಲೀಸರೇ ವಿಧನಾಸೌಧಕ್ಕೆ ದಿಗ್ಬಂಧನ ವಿಧಿಸುವ ಮೂಲಕ ಪರೋಕ್ಷವಾಗಿ ನಮ್ಮನ್ನು ಬೆಂಬಲಿಸಿದ್ದಾರೆ! ಎಂದು ದೇಶಪಾಂಡೆ ಸಮರ್ಥಿಸಿಕೊಂಡರು.
ರಾಜ್ಯದ ಅಭಿವೃದ್ಧಿಯನ್ನು ಸಹಿಸಲು ಆಗದೆ ಅಸೂಯೆಯಿಂದ ಕಾಂಗ್ರೆಸ್ ಪಕ್ಷದ ನಾಯಕರು ಈ ರೀತಿ ವರ್ತಿಸುತ್ತಿದ್ದಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ದೇಶಪಾಂಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನೆಮ್ಮದಿ ಕೇಂದ್ರಗಳ ಮೂಲಕ ಪಡಿತರ ಚೀಟಿಯನ್ನು ವಿತರಿಸಿ ನಂತರ ಅದನ್ನು ಹಿಂದಕ್ಕೆ ಪಡೆದು ಜನರ ನೆಮ್ಮದಿ ಹಾಳು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕೋಮು ಸೌಹಾರ್ದಕ್ಕೆ ಧಕ್ಕೆ, ಬೆಂಗಳೂರಿನಲ್ಲಿ ಅತಿವೃಷ್ಟಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ, ಆರ್ಥಿಕ ದಿವಾಳಿತನ ಇವೇ ಯಡಿಯೂರಪ್ಪ ಸರಕಾರದ ಅಭಿವೃದ್ಧಿ ಕಾರ್ಯಗಳು ಎಂದು ಛೇಡಿಸಿದರು. ಅ.12ರಂದು ಮೂರನೇ ಹಂತದ ಪ್ರತಿಭಟನೆ ಮಾಡಲಿದ್ದೇವೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications