ಮೋರಿಗಳ ಸ್ವಚ್ಚತೆಗೆ ಪೈಲೆಟ್ ಯೋಜನೆ : ಕಟ್ಟಾ
ಹೆಬ್ಬಾಳದಲ್ಲಿನ ರಸ್ತೆ, ಒಳಚರಂಡಿ ವ್ಯವಸ್ಥೆ ಮತ್ತಿತರ ನಾಗರಿಕ ಸೌಕರ್ಯಗಳ ಕೊರತೆಗಳ ಕುರಿತಂತೆ ಪಾದಯಾತ್ರೆ ಮೂಲಕ ಪರಿವೀಕ್ಷಣೆ ನಡೆಸಿದರು. ಮೋರಿಗಳ ಮೇಲೆ ಮನೆಕಟ್ಟುವುದು, ಕೊಳಚೆ ನೀರನ್ನು ಮೋರಿಗೆ ಬಿಡುವುದು ನಡೆದಿದೆ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ದೊಡ್ಡ ಮೋರಿಗಳ ಎರಡೂ ಕಡೆ 15 ಅಡಿ ಜಾಗವನ್ನು ತೆರವು ಮಾಡಿಸುವುದು, ಆ ಸಂಬಂಧ ಭೂಸ್ವಾಧೀನ ಮಾಡಿ ಅಲ್ಲಿ ಒಳಚರಂಡಿಯ ಫೀಡರ್ಲೈನ್, ಲ್ಯಾಟರಲ್ ಲೈನ್ ಸಂಪರ್ಕ ಕಲ್ಪಿಸುವುದು, 2 ರಿಂದ 5 ಕಿ.ಮೀ.ಗೆ ಒಂದರಂತೆ ಎಸ್ಟಿಪಿ ಗಳ (ನೀರು ವಿಸರ್ಜಿತ ನೀರು ಸಂಸ್ಕರಣಾ ಘಟಕ) ಕಾರ್ಯ ಕೈಗೊಳ್ಳಲಿದ್ದು ಐ.ಎಲ್.ಎಫ್.ಎಸ್ ನಿಂದ ಸರ್ವೇ ಕಾರ್ಯ ನಡೆಯಲಾಗುತ್ತಿದೆಯೆಂದು ಸಚಿವರು ತಿಳಿಸಿದರು.
ದೊಡ್ಡ ಮೋರಿಗಳ ಅಕ್ಕಪಕ್ಕ 8 ಅಡಿ ಚೈನ್ ಅಂಡ್ ಫೆನ್ಸಿಂಗ್ ಕಾರ್ಯವನ್ನು ಈಗಾಗಲೇ ಹಲವು ಕಡೆ ಪೂರ್ಣಗೊಳಿಸಿದ್ದು, ಉಳಿದ ಎಲ್ಲ ಕಡೆಯು ಮಾಡಲಾಗುತ್ತಿದ್ದು, ಅನಾಹುತಗಳು ಸಂಬಂಧಿಸಿದಂತೆ ತಡೆಗಟ್ಟಲಾಗುವುದು. ಸಣ್ಣ ಚರಂಡಿಗಳ ಸಿಮೆಂಟ್ ಸ್ಲಾಬ್ಗಳಿಂದ ಮುಚ್ಚಲಾಗುತ್ತಿವೆಯೆಂದರು.
ನಗರದಲ್ಲಿ ಬೃಹತ್ ಬೆಂಗಳೂರು ನಗರ ಪಾಲಿಕೆವತಿಯಿಂದ 1,600 ಕೋಟಿ ರೂ.ಗಳ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಬೆಂಗಳೂರು ಜಲಮಂಡಳಿಯಿಂದ 9,000 ಕೋಟಿ ರೂ.ಗಳು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 800 ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತಿದ್ದು ಈವರೆಗೆ ಶೇ. 60 ರಷ್ಟು ಪ್ರಗತಿ ಸಾಧಿಸಿವೆ ಮತ್ತು ಮಾರ್ಚ್ ಅಂತ್ಯದವೇಳೆಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)