ಮೊದಲ ಬಾರಿಗೆ ತಪ್ಪೊಪ್ಪಿಕೊಂಡ ದೇವೇಗೌಡ
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಸ್ ಯೋಜನೆಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ವಿಶೇಷವಾಗಿ ಚರ್ಚಿಸುವುದಾಗಿ ಗೌರವಾನ್ವಿತ ಬಿಎಸ್ ಯಡಿಯೂರಪ್ಪನವರು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಅದರಂತೆ ಅಕ್ಟೋಬರ್ ತಿಂಗಳಲ್ಲಿ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು.
ಹಗರಣಗಳ ಬಗ್ಗೆ ಚರ್ಚೆ ಮಾಡಲು ಕರೆದಿದ್ದ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಮಾಜಿ ಪ್ರಧಾನಿಗಳು ತೆಗೆದುಕೊಂಡ ತಪ್ಪು ನಿರ್ಧಾರಗಳು ನೈಸ್ ಹಗರಣಕ್ಕೆ ಕಾರಣವಾಗಿದೆ ಎಂದಿದ್ದಾರೆ. ಅಲ್ಲದೆ ಯಾರ ಅಧಿಕಾರಾವಧಿಯಲ್ಲಿ ಏನೇನು ಆಗಿದೆ ಎಂಬುದನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಅವರು ಮಾತು ಉಳಿಸಿಕೊಳ್ಳಲಿ ಎಂದು ದೇವೇಗೌಡ ತಿರುಗೇಟು ನೀಡಿದರು.
ನನ್ನ ದುರದೃಷ್ಟವೋ ಏನೋ ನೈಸ್ ಮೂಲ ಒಪ್ಪಂದಕ್ಕೆ ಸಹಿ ಮಾಡಿದ ನಂತರ ರಾಷ್ಟ್ರ ರಾಜಕಾರಣಕ್ಕೆ ತೆರಳಿ ತಪ್ಪು ಮಾಡಿದೆ. ಆನಂತರ ಸರಕಾರದಲ್ಲಿದ್ದ ಮುಖ್ಯಮಂತ್ರಿ ಜೆ ಎಚ್ ಪಟೇಲ್, ಹಣಕಾಸು ಸಚಿವ ಸಿದ್ಧರಾಮಯ್ಯ, ಅಂದಿನ ಕೈಗಾರಿಕೆ ಮಂತ್ರಿ ಆರ್ ವಿ ದೇಶಪಾಂಡೆ ಅವರ ಅಧಿಕಾರಾವಧಿಯಿಂದ ಹಿಡಿದು 1999ರಲ್ಲಿ ಬಂದ ಕಾಂಗ್ರೆಸ್ ಸರಕಾರದ ಕಾಲಾವಧಿವರೆಗೂ ನೈಸ್ ಯೋಜನೆ ಕುರಿತು ವಿಸ್ತೃತವಾಗಿ ಚರ್ಚೆ ಮಾಡಿದರೆ ಯಡಿಯೂರಪ್ಪನವರಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ದೇವೇಗೌಡ ಒತ್ತಾಯಿಸಿದ್ದಾರೆ.
ನಾಲಿಗೆ ಬಿಗಿ ಹಿಡಿದು ಮಾತಾಡಿ : ಯಡಿಯೂರಪ್ಪ
ಕಳೆದ ಭಾನುವಾರ ನಡೆದ ಪಂಚಾಯತ್ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಸರಕಾರ ಅಕ್ರಮ ಎಸಗಿದೆ. ಈ ಅಕ್ರಮದಲ್ಲಿ ಪಂಚಾಯತ್ ರಾಜ್ಯ ಸಚಿವರ ಕೈವಾಡ ಸ್ಪಷ್ಟವಾಗಿದೆ. ಜೊತೆಗೆ ಸಂಘ ಪರಿವಾರದ ಕಾರ್ಯಕರ್ತರಿಗೆ ಅನುಕೂಲವಾಗುವಂತೆ ಸರಕಾರ ನಡೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿಯವರೆ ಪಂಚಾಯತ್ ಅಧಿಕಾರಿಗಳು ನೇಮಕಾತಿ ಪರೀಕ್ಷೆ ಪಾರದರ್ಶಕವಾಗಿ ನಡೆದಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ವಿನಾಕಾರಣ ಸರಕಾರ ವಿರುದ್ಧ ಮತ್ತು ವೈಯಕ್ತಿಕ ನಿಂದನೆ ಮಾಡುತ್ತಾ ತಿರುಗಾಡುವುದನ್ನು ನಿಲ್ಲಿಸಿ, ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಯಡಿಯೂರಪ್ಪ ತಾಕೀತು ಮಾಡಿದ್ದಾರೆ. ಯಾವ ಯಾವ ಸರಕಾರಗಳು ಬಂದಾಗ ಸರಕಾರಿ ನೇಮಕಾತಿಗಳು ಹೇಗೆ ನಡೆದಿವೆ ಎಂಬುದು ನನಗೆ ಗೊತ್ತಿದೆ. ನಾನು ಮನಸ್ಸು ಮಾಡಿದ್ದರೆ, ಹೇಗಾದರೂ ನಡೆಸಬಹುದಿತ್ತು. ಆದರೆ, ವಿದ್ಯಾವಂತ ಯುವಕ-ಯುವತಿಯರಿಗೆ ಸರಕಾರಿ ಉದ್ಯೋಗಗಳು ಸಿಗಬೇಕು ಎನ್ನುವ ದೃಷ್ಟಿಯಿಂದ ಪಾರದರ್ಶಕ ಪರೀಕ್ಷೆ ನಡೆಸಲಾಗಿದೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.
(ದಟ್ಸ್ ಕನ್ನಡ ವಾರ್ತೆ)