ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ?
ಮೈತ್ರಿಯಿಂದ ಕಾಂಗ್ರೆಸ್ ಗೆ ಲಾಭವಿದ್ದು, ಒಂದೇ ಏಟಿಗೆ ಶತ್ರು ಹರಣ, ಮಿತ್ರ ಗಳಿಕೆಯ ಕನಸು ಕಾಣುತ್ತಿದೆ. ಜೆಡಿಎಸ್ ಗಿಂತ ಕಾಂಗ್ರೆಸ್ ಪಕ್ಷ ಮೈತ್ರಿ ವಿಷಯದಲ್ಲಿ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಮೈತ್ರಿ ಮಾತುಕತೆಗೆ ಹಿರಿಯ ನಾಯಕರು ಆಗಮಿಸುವ ನಿರೀಕ್ಷೆಯಿದೆ. 2006 ರಲ್ಲಿ ಅಧಿಕಾರ ಗಳಿಸಿದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮತ್ತೆ ಅಧಿಪತ್ಯ ಸ್ಥಾಪಿಸಬೇಕಾದರೆ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರಿಗೆ ಮೈತ್ರಿಯ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು.
ಈಗಾಗಲೇ ಕಾಂಗ್ರೆಸ್ ನ ಹಿರಿ ತಲೆಗಳಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಬಿಕೆ ಹರಿಪ್ರಸಾದ್, ಆಸ್ಕರ್ ಫರ್ನಾಂಡಿಸ್ ಹಾಗೂ ಕೆ ಎಚ್ ಮುನಿಯಪ್ಪ ಅವರು ಮೈತ್ರಿ ಬಗ್ಗೆ ಒಲವು ತೋರಿದ್ದಾರೆ ಮುಂದಿನ ಮಾತುಕತೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಚುನಾವಣೆಯಿಂದ ಹಿಡಿದು ಇತ್ತೀಚಿನ ಉಪಚುನಾವಣೆವರೆಗೂ ಬಿಜೆಪಿಯ ಉತ್ತಮ ಸಾಧನೆ ಮೆರೆದಿರುವುದರಿಂದ, ಸಹಜವಾಗಿ ಪ್ರತಿಪಕ್ಷಗಳು ಹೆಚ್ಚಿನ ತಂತ್ರಗಾರಿಕೆ ನಡೆಸಲು ಮುಂದಾಗಿದೆ. ಮೈತ್ರಿಯಿಂದ ಮಾತ್ರ ಬಿಜೆಪಿಯನ್ನು ಬಗ್ಗುಬಡಿಯಲು ಸಾಧ್ಯ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಮನವರಿಕೆಯಾಗಿದೆ.
(ದಟ್ಸ್ ಕನ್ನಡವಾರ್ತೆ)