ಎಚ್1ಎನ್1 ಭಯ : ಪಾರ್ಸೆಲ್ ಮೊರೆ ಹೋದ ಜನ
ಬೆಂಗಳೂರು, ಆ. 19 : ಎಚ್ 1ಎನ್ 1 ಮಾರಿಗೆ ಬೆಂಗಳೂರಿಗರು ತೀವ್ರ ಭಯಭೀತರಾಗಿದ್ದು, ಮನೆಯಿಂದ ಹೊರಹೋಗಲು ಮನಸ್ಸು ಮಾಡುತ್ತಿಲ್ಲ. ಈಗಾಗಲೇ ಬೆಂಗಳೂರು ನಗರವೊಂದರಲ್ಲೇ ಐದು ಮಂದಿ ಹಂದಿಜ್ವರದಿಂದ ಮೃತಪಟ್ಟಿರುವುದು ದೃಢವಾಗಿದೆ. (ಮಂಗಳವಾರ ಮೃತಪಟ್ಟಿರುವ ಮಂಜುನಾಥ್ ಎಚ್1ಎನ್1 ನಿಂದ ಸಾವನ್ನಪ್ಪಿಲ್ಲ ಎಂದು ವಿಕ್ಟೋರಿಯಾ ವೈದ್ಯರು ಸ್ಪಷ್ಟಪಡಿಸಿದ್ದಾರೆ)
ಎಚ್1 ಎನ್1 ಮಾರಿಗೆ ಹಾವಳಿ ಮೀತಿಮೀರುತ್ತಿದ್ದು, ಕಚೇರಿ ಮುಗಿಸಿ ಆಹಾರ, ತಿಂಡಿ ಮತ್ತಿತರ ಕಾರಣಗಳಿಗೆ ಹೊರಹೋಗುತ್ತಿದ್ದ ಜನರು ಇದೀಗ ಹೋಟೆಲ್, ರೆಸ್ಟೋರೆಂಟ್ ಗಳಿಂದ ಪಾರ್ಸೆಲ್ ಗೆ ತರುತ್ತಿದ್ದಾರೆ. ಇನ್ನೂ ಕೆಲ ಸ್ಥಿತವಂತರು ವೆಬ್ ಸೈಟ್ ಮೂಲಕ ಆರ್ಡರ್ ಮಾಡಿ ತಮಗೆ ಬೇಕೆನಿಸಿದೆ ಆಹಾರಗಳನ್ನು ತರಿಸಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಂಗ್ರಿಜೋನ್.ಕಾಂ ನ ಸಂಸ್ಥಾಪಕ ರಿತೇಶ್ ದ್ವಿವೇದಿ, ಬೆಂಗಳೂರಿನಲ್ಲಿ ಹಂದಿಜ್ವರದಿಂದ ಸಾವುಗಳು ಸಂಭವಿಸುತ್ತಿರುವುದರಿಂದ ಜನಜಂಗುಳಿ ಇರುವ ಸ್ಥಳಗಳಿಗೆ ಬರಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿ ಪಾರ್ಸೆಲ್ ತೆಗೆದುಕೊಂಡು ಹೋಗುವುದು, ಪಾರ್ಸೆಲ್ ತರಿಸಿಕೊಳ್ಳುವುದು ಹೆಚ್ಚಾಗಿದೆ. ಕಳೆದ 15 ದಿನಗಳ ಅವಧಿಯಲ್ಲಿ ನಮ್ಮ ವ್ಯಾಪಾರ ವಹಿವಾಟು ಶೇ. 10 ರಷ್ಟು ಏರಿಕೆ ಕಂಡಿದೆ ಎಂದು ಹೇಳುತ್ತಾರೆ.
ಮುಂಜಾಗ್ರತಾ ಕ್ರಮವಾಗಿ ಹೆಚ್ಚು ಜನರಿರುವ ಕಡೆಯಲ್ಲಿ ನಾವು ತೆರಳುತ್ತಿಲ್ಲ. ಎಚ್1ಎನ್1 ಹಾವಳಿ ತೀವ್ರವಾಗಿದ್ದರಿಂದ ಸುರಕ್ಷಿತಗಾಗಿ ಈ ಕ್ರಮ ಕೈಗೊಂಡಿದ್ದೇವೆ. ಮನೆಗೆ ಬೇಕಿರುವ ಅಗತ್ಯ ವಸ್ತುಗಳನ್ನು ಪಾರ್ಸೆಲ್ ತರಿಸಕೊಳ್ಳುತ್ತಿದ್ದೇವೆ ಎನ್ನುವುದು ಸಾಫ್ಟ್ ವೇರ್ ಇಂಜಿನಿಯರ್ ಮನೋಜ್ ಅವರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಜನಸಾಮಾನ್ಯರು ತಮ್ಮ ಸುರಕ್ಷತೆಗೆ ಒತ್ತು ಕೊಡುವುದು ಉತ್ತಮ ಎನ್ನುವುದು ವೈದ್ಯರ ಅಭಿಮತವಾಗಿದೆ.
(ದಟ್ಸ್ ಕನ್ನಡ ವಾರ್ತೆ)