ಬೆಂಗಳೂರಿನಲ್ಲಿ ಹಂದಿಜ್ವರಕ್ಕೆ ಮೊದಲ ಬಲಿ
ಈ ಕುರಿತು ವಿವರ ನೀಡಿರುವ ಸೇಂಟ್ ಫಿಲೋಮಿನಾ ಆಸ್ಪತ್ರೆಯ ನಿರ್ದೇಶಕ ಶಂಕರಪ್ರಸಾದ್, ಕಳೆದ ಆಗಸ್ಟ್ 7 ರಂದು ರೂಪಾ ಎಂಬುವವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಬುಧವಾರ ಮಧ್ಯಾಹ್ನ 1 ಗಂಟೆಗೆ ಮೃತಪಟ್ಟಿದ್ದರು. ಅವರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಅವರು ಎಚ್ 1ಎನ್1 ಸೋಂಕಿನಿಂದಲೇ ಸಾವಿಗೀಡಾಗಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ರೂಪ ಅವರು ಬಿಟಿಎಂ ಲೇಔಟ್ ನ ಎರಡನೇ ಹಂತದ ನಿವಾಸಿಯಾಗಿದ್ದಾರೆ. ರೂಪಾ ಅವರ ಪತಿ ಆನಂದ್, ಮೈಕೋ ಕಂಪನಿಯ ಉದ್ಯೋಗಿ ಆಗಿರುವರು. ರೂಪಾ ಆನಂದ್ ಅವರಿಗೆ ಎರಡು ಸಣ್ಣ ಮಕ್ಕಳಿದ್ದಾರೆ. ರೂಪಾ ಅವರು ಕೆಲಸ ನಿರ್ವಹಿಸುತ್ತಿದ್ದ ಸುದರ್ಶನ ವಿದ್ಯಾಮಂದಿರ ಶಾಲೆಗೆ ರಜೆ ನೀಡಲು ಸೂಚಿಸಲಾಗಿದೆ. ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಕೂಡಲೇ ಪರೀಕ್ಷೆಗೆ ಒಳಗಾಗಲು ವೈದ್ಯಾದಿಕಾರಿಗಳು ಸೂಚಿಸಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ಮೃತ ರೂಪಾ ಅವರ ಪತಿ ಆನಂದ್ ಅವರು ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಿದ್ದಾರೆ. ಕೇವಲ ಜ್ವರ ಬಂದಿದೆ ಎಂದು ನಾವು ರೂಪಾಳನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಹಂದಿಜ್ವರ ಬಂದಿರುವ ಕುರಿತು ಆಸ್ಪತ್ರೆ ತಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೆ, ಪರಿಣಿತ ವೈದ್ಯರ ನೆರವಿಲ್ಲದೆ ಆಸ್ಪತ್ರೆಯ ಆಡಳಿತ ಮಂಡಳಿ ತರಬೇತಿ ವೈದ್ಯರ ನೆರವಿನಿಂದಲೇ ಚಿಕಿತ್ಸೆ ನಡೆಸುತ್ತಿರುವುದು ದುರಂತ ಎಂದು ಆನಂದ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)