ಕನ್ನಡ ಕಟ್ಟಾಳುಗಳನ್ನು ಕಟ್ಟಿ ಹಾಕಿದ ಪೊಲೀಸ್

ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅಡ್ಡಿಪಡಿಸುವ ಕನ್ನಡ ಹೋರಾಟಗಾರರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. 200 ಇನ್ಸ್ ಪೆಕ್ಟರ್ ಗಳು ಸೇರಿದಂತೆ ಸಾವಿರ ಗೃಹರಕ್ಷಕ ದಳ, 65 ಎಸಿಪಿ, 1,200 ಮುಖ್ಯಪೇದೆ, 30 ಕೆಎಸ್ ಆರ್ ಪಿ ತುಕಡಿಗಳನ್ನು ಬೆಂಗಳೂರಿನಲ್ಲಿ ನಿಯೋಜಿಸಲಾಗಿದೆ.
ಏತನ್ಮಧ್ಯೆ ಬೆಂಗಳೂರು ಬಂದನ್ನು ವಾಪಸು ಪಡೆಯಲು ಕನ್ನಡಪರ ಸಂಘಟನೆಗಳು ನಿರಾಕರಿಸಿವೆ. ಪರಿಸ್ಥಿತಿ ವಿಕೋಪಕ್ಕೆ ತಲುಪುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟಿ ಎ ನಾರಾಯಣಗೌಡ, ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಮುಖ್ಯಸ್ಥರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರತಿಮೆ ಅನಾವರಣಗೊಳಿಸುವವರೆಗೂ ಬಂಧಿತರನ್ನು ಬಿಡುಗಡೆ ಮಾಡದಿರಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಸರಕಾರದ ಈ ಕ್ರಮಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಬೆಳಗ್ಗೆಯಿಂದ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದವು.
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಭಾನುವಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಳ್ಳಾರಿ ರಸ್ತೆ ಬಂದ್ ಮಾಡಲು ಯೋಜನೆ ರೂಪಿಸಿದ್ದ ಕರವೇಯ 22 ಮುಖಂಡರನ್ನು ಯಲಹಂಕ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ನಾರಾಯಣಗೌಡ ಬಣದ 22 ಮಂದಿಯನ್ನು ಡಿಸಿಪಿ ಬಸವರಾಜ ಮಾಲಗತ್ತಿ, ಎಸಿಪಿ ರಾಮಚಂದ್ರಪ್ಪ, ಇನ್ಸೆಪೆಕ್ಟರ್ ಅಶೋಕ್ ಕುಮಾರ್, ರತ್ನಾಕರ ಶೆಟ್ಟಿಮ್ ಕೆಂಚೇಗೌಡ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಗದಗ, ಬೀದರ್, ಬೆಳಗಾವಿ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದಲೂ ನಾರಾಯಣಗೌಡ ಬಂಧನಕ್ಕೆ ಕರವೇ ಮತ್ತು ಇತರೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿವೆ.
ಕರವೇ ಕಾರ್ಯಕರ್ತನ ಆತ್ಮಹತ್ಯೆ ಬೆದರಿಕೆ
ತಿರುವಳ್ಳುವರ್ ಪ್ರತಿಮೆ ಅನಾವರಣ ಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರವೀಣ್ ಶೆಟ್ಟಿ ಬಳಗದ ಮೈಸೂರು ನಗರಾಧ್ಯಕ್ಷ ಮಾದೇಶ ಬೆದರಿಕೆ ಒಡ್ಡಿದ್ದರು. ಮಾದೇಶ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದಿನ ಧ್ವಜಸ್ತಂಬ ಏರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ನಂತರ ಮನವೊಲಿಸುವಲ್ಲಿ ಸಫಲರಾಗಿರುವ ಪೊಲೀಸರು ಆತನನ್ನ್ನು ಧ್ವಜಸ್ತಂಬದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಪಾಲಕೃಷ್ಣ ನೇತೃತ್ವದ ಪೊಲೀಸ್ ತಂಡ ಮಾದೇಶ್ ಅವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications