ಕುಮುದಾ ಕುಟುಂಬಕ್ಕೆ ಉಪಸಭಾಪತಿ ಪುಟ್ಟಣ್ಣ ಸಾಂತ್ವನ
ರಾಮನಗರ, ಆ. 6 : ಇತ್ತೀಚೆಗೆ ಕೊಲೆಯಾದ ರಾಮನಗರದ ಬಸವನಪುರ ಶಾಲಾ ಶಿಕ್ಷಕಿ ಕುಮುದಾ ಅವರ ಮನೆಗೆ ಶಿಕ್ಷಕ ಕ್ಷೇತ್ರದ ಪ್ರತಿನಿಧಿ ಮತ್ತು ವಿಧಾನಪರಿಷತ್ ಉಪಸಭಾಪತಿ ಪುಟ್ಟಣ್ಣ ಗುರುವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಬಸವನಪುರ ಶಾಲಾ ಶಿಕ್ಷಕಿ ಕುಮುದಾರವರ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿ ಯುವಕರ ತಂಡವನ್ನ ಬಿಡದಿ ಪೋಲೀಸರು 48 ಗಂಟೆಯೊಳಗೆ ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಪ್ರಕರಣದಿಂದ ವರ್ಷದ ಹಿಂದೆ ಕೊಲೆಯಾಗಿದ್ದ ಶಿಕ್ಷಕಿ ಸುಜಾತಾ ಅವರ ಹತ್ಯೆಯಲ್ಲಿಯೂ ಈ ತಂಡ ಭಾಗಿಯಾಗಿದ್ದು ಬೆಳಕಿಗೆ ಬಂದಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಶಿಕ್ಷಕಿ ಕುಮುದಾ ಮತ್ತು ಸುಜಾತರ ಕೊಲೆ ಪ್ರಕರಣಗಳು ಅಮಾನವೀಯವಾದ ಘಟನೆಯಾಗಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ದೂರಪ್ರದೇಶದ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಶಿಕ್ಷಕಿಯರ ಅನುಕೂಲಕ್ಕಾಗಿ ವಸತಿಗೃಹಗಳನ್ನ ನಿರ್ಮಾಣ ಮಾಡಬೇಕು. ಶಿಕ್ಷಕಿಯರು ಹತ್ತಿರದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವಂತೆ ಅವಕಾಶ ನೀಡಬೇಕು ಹಾಗೂ ವರ್ಗಾವಣೆ ನೀತಿಯನ್ನ ಸಡಿಲಗೊಳಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ ಎಂದರು.
ಮಾತೃ ಪ್ರೀತಿ ಕಳೆದುಕೊಂಡ ಕುಮುದಾರ ಮಕ್ಕಳಿಗೆ ಸರ್ಕಾರದ ವತಿಯಿಂದ ಒಂದು ಲಕ್ಷ ರು. ಪರಿಹಾರ ಬಿಡುಗಡೆ ಮಾಡಿಸಲಾಗಿದೆ. ವೈಯುಕ್ತಿಕವಾಗಿ ಚುನಾವಣೆ ಕಳೆದ ನಂತರ ಮಕ್ಕಳ ಹೆಸರಿನಲ್ಲಿ ತಲಾ 25 ಸಾವಿರ ಹಣ ಠೇವಣಿ ಇಡುತ್ತೇನೆಂದು ಪುಟ್ಟಣ್ಣ ಹೇಳಿದರು.
ಈ ಸಂಧರ್ಭದಲ್ಲಿ ತಾಲ್ಲೂಕ್ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ, ಸಮನ್ವಯಾಧಿಕಾರಿ ಬಿ.ಸೋಮಲಿಂಗಯ್ಯ, ಪ್ರೌಢಶಾಲಾಶಿಕ್ಷಕರ ಸಂಘದ ಬೈರಲಿಂಗಯ್ಯ, ಉಪಾಧ್ಯಕ್ಷ ಟಿ.ಸಿ.ಕೆ.ರಾಜು, ತಾಲ್ಲೂಕ್ ಕಾರ್ಯದರ್ಶಿ ಜಯಣ್ಣ, ಶಿಕ್ಷಕರಸಂಘದ ಮಹಾಲಿಂಗಯ್ಯ, ಮೃತಶಿಕ್ಷಕಿ ಕುಮುದಾರ ಪತಿ ಅಪ್ಪಾಜಿ, ತಾಯಿ ಗೌರಮ್ಮ, ತಂಗಿ ಗೀತಾ, ಮಕ್ಕಳಾದ ಸ್ಪೂರ್ತಿ ಮತ್ತು ಉಜ್ವಲ್ ಹಾಜರಿದ್ದರು.