ತಿರುವಳ್ಳುವರ್ ವಿವಾದ: ಬೆಂಗಳೂರು ಬಂದ್ ಗೆ ಕರೆ

ಕನ್ನಡ ಚಳವಳಿ ವಾಟಾಳ್ ಪಕ್ಷ, ಅಖಿಲ ಕರ್ನಾಟಕ ಗಡಿ ರಕ್ಷಣಾ ಸಮಿತಿ, ಕನ್ನಡ ಸೇನೆ, ಕನ್ನಡ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ ಶೆಟ್ಟಿ ಬಣ) ಇಂದು ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಚಳವಳ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ರಾಜಧಾನಿ ಬೆಂಗಳೂರನ್ನು ತಮಿಳರ ಸಾಮ್ರಾಜ್ಯ ಮಾಡಲು ಎಂದಿಗೂ ಬಿಡುವುದಿಲ್ಲ. ಸರಕಾರ ಕನ್ನಡಿಗರ ಹಿತಾಸಕ್ತಿ ಕಡೆಗಣಿಸಿ ತಮಿಳು ಕವಿ ತಿರುವಳ್ಳವರ್ ಪ್ರತಿಮೆ ಅನಾವರಣಕ್ಕೆ ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ನೀತಿಯನ್ನು ಖಂಡಿಸಿ ಅಗಸ್ಟ್ 9 ರಂದು ಬೆಂಗಳೂರು ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡುವ ಮೂಲಕ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ತಡೆಯುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು. ಇದಕ್ಕೆ ಕರವೇದ ಶಿವರಾಮೇಗೌಡ, ಕನ್ನಡ ಸೇನೆಯ ಪ್ರಭಾಕರ ರೆಡ್ಡಿ ಮತ್ತು ಕೆ ಆರ್ ಕುಮಾರ ಧ್ವನಿಗೂಡಿಸಿದರು.
ಕನ್ನಡ ಚಿತ್ರರಸಿಕರ ಅರಾಧ್ಯದೈವ ಡಾ ರಾಜಕುಮಾರ್ ಅವರನ್ನು ಅಪಹರಣ ಮಾಡಿದ್ದ ಕಾಡುಗಳ್ಳ ವೀರಪ್ಪನ್ ಬೇಡಿಕೆಯಾದ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಸ್ಥಾಪನೆ ಮಾಡುವ ಮೂಲಕ ಸರಕಾರ ನಾಡಿಗೆ ಅಗೌರವ ತಂದಿದೆ ಎಂದು ಕಿಡಿಕಾರಿದರು. ತಮಿಳುನಾಡು ಸರಕಾರ ಹೊಗೇನಕಲ್ ಯೋಜನೆಯನ್ನು ಕೈಬಿಡಬೇಕು. ಕಾವೇರಿ ನದಿ ನೀರಿಗೆ ಸಂಬಂದಿಸಿದಂತೆ ರಾಜ್ಯದ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು ಕೈಬಿಡಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ವಾಟಾಳ್ ಆಗ್ರಹಿಸಿದರು.
ರಾಜ್ಯದ ಮೇಲೆ ನಿರಂತರ ದಾಳಿ ಮಾಡುವ ತಮಿಳನಾಡಿನವರ ಪ್ರತಿಮೆಗಳನ್ನು ಇಲ್ಲಿ ಏಕೆ ಅನಾವರಣ ಮಾಡಬೇಕು ಎಂದು ಪ್ರಶ್ನಿಸಿದ ವಾಟಾಳ್, ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಅನಾವರಣದ ವೇಳೆ ಕರೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications