ವರುಣನ ಅಬ್ಬರ ದೆಹಲಿ ತತ್ತರ : 10 ಸಾವು
ನವದೆಹಲಿ, ಜು. 28 : ರಾಜಧಾನಿಯಲ್ಲಿ ಸೋಮವಾರ (ಜು 27) ಸುರಿದ ಭಾರಿ ಮಳೆಗೆ ಹತ್ತು ಮಂದಿ ಮೃತಪಟ್ಟು ಇತರ ಒಂಬತ್ತು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ದೆಹಲಿ ಪಕ್ಕ ಇರುವ ನೋಯಿಡಾ (ಸೆಕ್ಟರ್ 58) ಪ್ರದೇಶದಲ್ಲಿ ಗೋಡೆಯೊಂದು ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತ ಪಟ್ಟವರಲ್ಲಿ ನಾಲ್ಕು ಮಕ್ಕಳು ಮತ್ತು ಇಬ್ಬರು ಮಹಿಳೆಯರೂ ಸೇರಿದ್ದಾರೆ.
ರಾಜಧಾನಿಯಲ್ಲಿ ಭಾರೀ ವರ್ಷಧಾರೆ ಮುಂದುವರಿದಿದ್ದು, ವಾಹನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂಡಿಯಾ ಗೇಟ್, ಜಾಕೀರ್ ಹುಸೇನ್ ಮಾರ್ಗ್, ಅಶೋಕಾ ರಸ್ತೆ, ಷಹಜಹಾನ್ ರಸ್ತೆ, ಪ್ರಗತಿ ಮೈದಾನ್, ಕೆಂಪುಕೋಟೆ ಮುಂತಾದ ಕಡೆ ನೀರು ನಿಂತಿದ್ದು, ವಾಹನ ದಟ್ಟನೆ ಹೆಚ್ಚಿದೆ. ವರುಣನ ಆರ್ಭಟದಿಂದಾಗಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಸೋಮವಾರ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ದೆಹಲಿಯಲ್ಲಿ ಸುಮಾರು 29.4 ಮಿಮಿ ನಷ್ಟು ಮಳೆಯಾಗಿದೆ. ಮತ್ತು ಇನ್ನೂ 2-3 ದಿನ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
(ಏಜನ್ಸೀಸ್)











Click it and Unblock the Notifications