ಕಡ್ಲೆ ಬೇಳೆ, ಉದ್ದಿನ ಬೇಳೆ ಬೆಲೆ ಇಳಿಕೆ
ಬೆಂಗಳೂರು, ಜು. 27 : ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಧಾನ್ಯಗಳ ಬಿತ್ತನೆಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿ ಧಾನ್ಯಗಳ ಬೆಲೆಇಳಿಮುಖವಾಗಿವೆ.
ಉತ್ತಮ ದರ್ಜೆ ಉದ್ದಿನ ಬೇಳೆ ಬಿಲ್ಟಿ ವ್ಯಾಪಾರ ಪ್ರಕಾರ ಕೆ.ಜಿ.ಗೆ 73-74 ರೂ. ಗೆ ಏರಿಕೆಯಾಗಿತ್ತು. ಈಗ ಅದರ ದರ 65-66 ರೂ.ಗೆ ಇಳಿದಿದೆ. ಮಧ್ಯಮ 66-68 ರೂ. ಇದ್ದದ್ದು 58-60 ರೂ.ಗೆ ವ್ಯಾಪಾರವಾಗಿದೆ. ತೊಗರಿ ಬೇಳೆ ದರ ಕೂಡಾ ಕೆ.ಜಿ. ಗೆ 7-8 ರೂ. ಕುಸಿದಿದೆ. ಕಡ್ಲೆ ಬೇಳೆ ಕೂಡಾ ಇದಕ್ಕೆ ಹೊರತಾಗಿಲ್ಲ 35-37 ರೂ.ಗೆ ಏರಿಕೆಯಾಗಿತ್ತು. 30-32 ರೂ.ಗೆ ಇಳಿಕೆ ಕಂಡಿದೆ. ಹೆಸರುಬೇಳೆ 66-68 ರೂ. ಇದ್ದದ್ದು 62-64 ರೂ.ಗೆ ಇಳಿದಿದೆ. ಹೆಸರು ಕಾಳು 6-7ರೂ. ಕಡಿಮೆಯಾಗಿದೆ.
ಹಬ್ಬದ ಸಮಯದಲ್ಲಿ ಬೆಲೆ ಇಳಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಈಗಾಗಲೆ ಸಾಕಷ್ಟು ಬೆಲೆ ಏರಿಕೆಯಾಗಿವೆ. ತೊಗರಿಬೇಳೆ ಹೊರತುಪಡಿಸಿ ಇತರೆ ಬೇಳೆಕಾಳುಗಳು ಏರಿಕೆಯಾಗುವ ಸಂಭವವಿಲ್ಲ. ಅತಿಯಾದ ಬೆಲೆ ಏರಿಕೆಯಿಂದ ವ್ಯಾಪಾರದ ಪ್ರಮಾಣ ಕಡಿಮೆಯಾಗಿದ್ದರಿಂದ ಮತ್ತು ದಾಸ್ತಾನುಗಾರರ ಮೇಲೆ ಅಧಿಕಾರಿಗಳುದಾಳಿ ನಡೆಸುತ್ತಿರುವುದರಿಂದ ತೊಗರಿ ಬೇಳೆ ಬೆಲೆ ಇಳಿಕೆಗೆ ಇದು ಕಾರಣವಾಗಿದೆ.
ಕಡ್ಲೆ ಬೇಳೆ, ಉದ್ದಿನ ಬೇಳೆ ಬೆಲೆ ಏರಿಸಲು ಕಾರಣಗಳೇ ಇಲ್ಲ. ತೊಗರಿ ಬೇಳೆ 85-90 ರೂ . ಕಂಡಿದ್ದರಿಂದ ಉತ್ಪಾದಕರಿಗೆ ಲಾಭದ ದುರಾಶೆಯಿಂದ ಬೆಲೆ ಏರಿಸಿದ್ದಾರೆ. ಕಡ್ಲೆ ಕಾಳು ಬೆಳೆಯಲು ಮಳೆ ಬೇಕಾಗಿಲ್ಲ. ಹೆಚ್ಚಾಗಿ ಇಬ್ಬನಿಯ ವಾತಾವರಣಕ್ಕೆ ಬೆಳೆಯುತ್ತದೆ. ಕಳೆದ ವರ್ಷದಲ್ಲಿ ಆಂಧ್ರ ಪ್ರದೇಶ ಮಧ್ಯ ಪ್ರದೇಶ ಮತ್ತು ಕರ್ನಾಟಗಳಲ್ಲಿ ಉತ್ತಮ ಬೆಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಡ್ಲೆ ಬೇಳೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅರ್ಧದಷ್ಟು ಬೆಲೆ ಕುಸಿದಿತ್ತು. ಈಗಿನ ಬೆಲೆಯಲ್ಲಿ ಇನ್ನೂ ಇಳಿಕೆಯಾಗುವ ಸಂಭವವಿದೆ.
ಬಟಾಣಿಕಾಳು
ಪ್ರಸಕ್ತ ವರ್ಷದಲ್ಲಿ ಬಟಾಣಿ ಆಮದು ಏರಿಕೆಯಿಂದ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತಿದೆ. ಎರಡು ತಿಂಗಳ ಹಿಂದೆ ಕೆನಡಾ ಬಟಾಣಿ 50 ಕೆ.ಜಿ. ಗೆ 1,260೦ರೂ.ಇದ್ದದ್ದು1,150 ರೂ .ಗೆ ಇಳಿದಿದೆ. ಎಮ್.ಪಿ. 1,450 ರೂ. ಇತ್ತು. ಈಗ 1,250 ರೂ .ಗೆ ಕುಸಿದಿದೆ. ಕೆನಡಾ ಆಸ್ಟ್ರೇಲಿಯಾ ಮತ್ತು ತಾಂಜಾನಿಯಾದಲ್ಲಿ ಬಂಪರ್ ಬೆಳೆಯಾಗಿದ್ದು ವಿದೇಶಿಮಾರುಕಟ್ಟೆಯಲ್ಲಿ ಬಟಾಣಿ ದಾಸ್ತಾನು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಬೆಲೆ ಏರಿಕೆಯಾಗುವ ಸಂಭವವಿಲ್ಲ. ಆದರೆ ಬಿಳಿ ಬಟಾಣಿಕಾಳು ಮತ್ತು ಬಟಾಣಿ ಬೇಳೆ ಬೆಲೆಹೆಚ್ಚಳ ಕಂಡಿದೆ.
ಈ ಹಿಂದೆ 800-8500 ರೂ. ಇದ್ದದ್ದು 900-1000 ರೂ .ಗೆ ಅಧಿಕಗೊಂಡಿದೆ. ಬೇಳೆ900-1,000 ರೂ .ಗೆ ಇತ್ತು. ಈಗ ಅದರ ಬೆಲೆ 1,100-1,150 ರೂ .ಗೆ ಹೆಚ್ಚಿದೆ. ತೊಗರಿ ಬೇಳೆಬೆಲೆ ಏರಿಕೆ ಪ್ರಭಾವದಿಂದ ಇದು ಏರಿಕೆಯಾಗಲು ಕಾರಣವಾಗಿದೆ. ಇದನ್ನು ಸಾಂಬಾರಿಗೆ ಉಪಯೋಗಿಸುವುದರಿಂದ ಇದರ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದು ಧಾನ್ಯಗಳವ್ಯಾಪಾರಿಗಳು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)