ಕೆಎಂಎಫ್ ಅಧ್ಯಕ್ಷರಾಗಿ ಸೋಮಶೇಖರ ರೆಡ್ಡಿ ಆಯ್ಕೆ
ಶನಿವಾರ ಬೆಳಗ್ಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಎಚ್ ಡಿ ರೇವಣ್ಣ ನಾಮಪತ್ರ ಸಲ್ಲಿಸದೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಹಾಗಾಗಿ ಸೋಮಶೇಖರ ರೆಡ್ಡಿ ಅವರ ಗೆಲುವು ಸುಲಭವಾಗಿದೆ. 13 ಮಂದಿ ನಿರ್ದೇಶಕರು, ಕೆ ಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಪದಾಧಿಕಾರಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
ಕೆಎಂಎಫ್ ನಲ್ಲಿ ಒಟ್ಟು 13 ಒಕ್ಕೂಟಗಳಿದ್ದು. ಜೆಡಿಎಸ್ ನ ರೇವಣ್ಣ ಪರ ಕೇವಲ 3 ಒಕ್ಕೂಟಗಳ ಬೆಂಬಲವಿತ್ತು.ಹಾಗಾಗಿ ರೇವಣ್ಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಬಿಜೆಪಿಯ ಸೋಮಶೇಖರ ರೆಡ್ಡಿ ಪರ ಉಳಿದ 10 ಹಾಲು ಒಕ್ಕೂಟಗಳ ಬೆಂಬಲವಿದ್ದ ಕಾರಣ ಗೆಲುವು ಸುಲಭವಾಗಿದೆ.
ಕೆಎಂಎಫ್ ನ್ನು ಮುನ್ನಡೆಸುವ ಸಮರ್ಥ ನಾಯಕ ರೇವಣ್ಣ ಅವರೇ ಎಂದೇ ಬಿಂಬಿಸಲಾಗಿತ್ತು.ಹಾಲಿನ ಮಂಡಳಿಯಲ್ಲಿ ಬರೀ ಹಾಲಷ್ಟೇ ಅಲ್ಲ,ಸಾಕಷ್ಟು ಹಾಲಾಹಲವೂ ತುಂಬಿಕೊಂಡಿದೆ. ಕೆಎಂಎಫ್ ನ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಆಯ್ಕೆಯಾಗಿರುವ ಸೋಮಶೇಖರ ರೆಡ್ಡಿ ಎಷ್ಟರ ಮಟ್ಟಿಗೆ ಮುನ್ನಡೆಸುತ್ತಾರೆ ಎಂಬುದೇ ಮುಂದಿನ ಪ್ರಶ್ನೆ.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಶಾಸಕ ಅರಗ ಜ್ಞಾನೇಂದ್ರ ಅವರ ಹೆಸರುಗಳು ಕೇಳಿಬಂದಿದ್ದವು. ಸದಾನಂದ ಗೌಡರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಯಸಿದ್ದರು. ಕಡೆಗೆ ಕೆಎಂ ಎಫ್ ಅಧ್ಯಕ್ಷ ಸ್ಥಾನ ಬಳ್ಳಾರಿ ರೆಡ್ಡಿ ಧಣಿಗಳ ಪಾಲಾಗಿದೆ.
(ದಟ್ಸ್ ಕನ್ನಡ ವಾರ್ತೆ)