ದ್ವೀಪವಾದ ಕಪ್ಪನಹಳ್ಳಿ , ಹಾರ್ನಳ್ಳಿ ಗ್ರಾಮಗಳು

ಕುಟ್ರಹಳ್ಳಿ ಕೆರೆ ಸೇರಿದಂತೆ ಇತರೆ ಸಮೀಪದ ಹಳ್ಳಗಳು ಭರ್ತಿಯಾಗುವ ಕಾರಣ ನರಸಪ್ಪನ ಹಳ್ಳ ಪೂರ್ಣ ಪ್ರಮಾಣದಲ್ಲಿ ತುಂಬಿದೆ. ಹಾಗೇ ರಸ್ತೆಯ ಮೇಲೆ ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಇದರಿಂದಾಗಿ ರಸ್ತೆ ಸಂಚಾರ ಸ್ಥಗಿತವಾಗಿದ್ದು, ಕಪ್ಪನಹಳ್ಳಿ ಮತ್ತು ಶಿಕಾರಿಪುರ ರಸ್ತೆಯ ಮಧ್ಯ ಭಾಗದಲ್ಲಿ, ಈ ಹಳ್ಳ ಇರುವುದರಿಂದ ಗ್ರಾಮಸ್ತರಿಗೆ ಕೆಲವು ದಿನಗಳ ಕಾಲ ಪಟ್ಟಣದ ಸಂಪರ್ಕವೇ ಕಡಿತವಾಗುತ್ತಿದೆ. ಇದರಿಂದಾಗಿ ಕಪ್ಪನಹಳ್ಳಿ ಗ್ರಾಮದವರು ಸುತ್ತಿಬಳಸಿ ಪಟ್ಟಣಕ್ಕೆ ಬರುವಂತಾಗಿದೆ.ಇದು ಪ್ರತೀ ಮಳೆಗಾಲದಲ್ಲೂ ನಡೆಯುವ ಪ್ರಕ್ರಿಯೆಯಾಗಿದೆ. ಈ ಹಳ್ಳಕ್ಕೆ ಹಲವು ಬಾರಿ ಪೈಪ್ ಅಳವಡಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ, ಇಲ್ಲೂ ಕೂಡ ಪ್ರತೀ ವರ್ಷ ತೇಪೆ ಹಚ್ಚುವ ಕಾರ್ಯ ಸಂಬಂಧ ಪಟ್ಟ ಇಲಾಖೆಯಿಂದ ನಡೆಯುತ್ತಲೇ ಇದೆ.
ಪ್ರತೀ ಮಳೆಗಾಲದಲ್ಲೂ ಇದೇ ರೀತಿಯ ತೊಂದರೆಯನ್ನು ಗ್ರಾಮಸ್ತರು ಅನುಭವಿಸುವಂತಾಗಿದ್ದು, ವಾಹನ ಸಂಚಾರ ಇರಲಿ ನಡೆದುಕೊಂಡು ಹೋಗುವುದೇ ದುಸ್ತರದ ಸಂಗತಿಯಾಗಿದೆ.ಹಳ್ಳದ ಸುತ್ತಮುತ್ತ ಇರುವ ಜಮೀನು ಪ್ರತೀ ಬಾರಿ ಜಲಾವೃತವಾಗುವುದು ಸಾಮಾನ್ಯವಾಗಿದೆ. ಇನ್ನು ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು ಪರಿಹಾರ ಹುಡುಕುತ್ತಾರಾ ಎನ್ನುವುದು ಗ್ರಾಮಸ್ತರ ಪ್ರಶ್ನೆಯಾಗಿದೆ. ಇದೇ ರೀತಿ ಸುರಗಿಹಳ್ಳಿ ಮತ್ತು ಹಳೇ ಮುಗುಳಗೆರೆ ಗ್ರಾಮದ ಬಳಿ ಕುಮಧ್ವತಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ಕಾರಣ ರಸ್ತೆ ಸೇರಿದಂತೆ ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ. ಇದೀಗ ಈ ಭಾಗದ ಹಲವು ಗ್ರಾಮಗಳ ಗ್ರಾಮಸ್ತರು ಗ್ರಾಮ ಬಿಟ್ಟು ತೆರಳದಂತಾಗಿದೆ. ಒಟ್ಟಾರೆಯಾಗಿ ಈ ಗ್ರಾಮಗಳು ದ್ವೀಪಗಳಂತಾಗಿರುವುದಂತೂ ಸತ್ಯದ ಸಂಗತಿಯಾಗಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications