ಭಾರತದ ಉದ್ಯಮಿಗಳೊಂದಿಗೆ ಹಿಲರಿ ಸಮಾಲೋಚನೆ
ಆರ್ಥಿಕ ಬಿಕ್ಕಟ್ಟು, ಬಂಡವಾಳ ಹೂಡಿಕೆ ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ತಾಜ್ ಸಮೂಹ ಕಂಪನಿಗಳ ಅಧ್ಯಕ್ಷ ರತನ್ ಟಾಟಾ, ರಿಲಾಯನ್ಸ್ ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ, ಜೆಮ್ಶೆಡ್ ಗೋದ್ರೆಜ್, ಚಂದಾ ಕೊಚರಾರ್ ಮುಂತಾದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು. ಸಭೆಯಲ್ಲಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಕೂಡ ಭಾಗವಹಿಸಿದ್ದರು.
ಉದ್ಯಮಿಗಳೊಂದಿಗೆ ಮಾತುಕತೆ ನಡೆಸುವ ಮೊದಲು ತಾಜ್ ಹೊಟೇಲಿನಲ್ಲಿ ನವೆಂಬರ್ 26ರಂದು ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗಾಗಿ ಗೌರವ ಸೂಚಿಸುವ ಸಂತಾಪ ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ದಾಖಲಿಸಿದರು. ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಕುಟುಂಬಗಳನ್ನು ಭೇಟಿ ಮಾಡುವ ಕಾರ್ಯಕ್ರಮವನ್ನೂ ಹಿಲರಿ ಇಟ್ಟುಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್ 26ರಂದು ನಡೆದ ದಾಳಿಯಲ್ಲಿ ವಿದೇಶಿಯರೂ ಸೇರಿದಂತೆ 170 ಜನ ಹತರಾಗಿದ್ದರು.
ಭಾನುವಾರ ಅವರು ನವದೆಹಲಿಗೆ ತೆರಳಿ ರಾಜಕೀಯ ನಾಯಕರೊಡನೆ ಚರ್ಚೆ ನಡೆಸಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನೂ ಹಿಲರಿ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
(ಏಜೆನ್ಸೀಸ್)