ಜಲಾವೃತವಾದ ಕೊಡಗು : ಒಬ್ಬ ಸಾವು

ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಸುಮಾರು 52 ಮನೆಗಳ ಕುಸಿದಿವೆ. ಈ ಎರಡೂ ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿದುಹೋಗಿ 24 ಗಂಟೆಯಾಗಿದೆ. ಮಂಗಳೂರಿನಲ್ಲಿ ಕೂಡಾ ವರುಣ ಬಿಡದೇ ಜಡಿಯುತ್ತಿದ್ದು, ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಯುಗಚಿ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯವೂ ಭರ್ತಿ ಆಗುವತ್ತ ಸಾಗಿದೆ. ಭಾಗಮಂಡಲದಲ್ಲಿ ಅತೀ ಹೆಚ್ಚು ಅಂದರೆ ಸುಮಾರು 30 ಸೆಂ ಮೀ ಮಳೆ ಆಗಿದೆ.
ಕರಾವಳಿಯಲ್ಲಿ ಮಳೆಯ ಅಬ್ಬರ ಇಂದು ತಕ್ಕ ಮಟ್ಟಿಗೆ ತಗ್ಗಿದ್ದು, ಕೊಡಗಿನಲ್ಲಿ ಬುಧವಾರವೂ ಮಳೆಯ ತೀವ್ರತೆ ಹೆಚ್ಚಾಗಿದೆ. ಬೆಳಗ್ಗೆಯಿಂದಲೇ ಮಳೆ ಅಬ್ಬರಿಸುತ್ತಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಭಾಗಮಂಡಲ ದ್ವೀಪವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಕಡಿದು ಹೋಗಿದೆ. ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿಯೂ ಮಳೆಯ ರೌದ್ರಾವತಾರ ಜೋರಾಗಿದ್ದು, ತ್ರಿವೇಣಿ ಸಂಗಮ ಮತ್ತೆ ಜಲಾವೃತವಾಗಿದೆ. ಭಾಗಮಂಡಲ-ಮಡಿಕೇರಿ ರಸ್ತೆಯ ಚಿಕ್ಕ ಕೊಳ್ಳದಂತಾಗಿದ್ದು, ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಮಡಿಕೇರಿ-ಮೆಟ್ಟಳ್ಳಿ ಮತ್ತು ಮಡಿಕೇರಿ-ಮೂರ್ನಾಡು ನಡುವಿನ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಮಡಿಕೇರಿಯ ಮರಗೋಡು ಗ್ರಾಮದ ಕಾಫಿತೋಟದಲ್ಲಿ ಮರ ಉರುಳಿದ್ದರಿಂದ ಕಾರ್ಮಿಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಯೂ ಕೂಡಾ ಹುಚ್ಚೆದ್ದು ಬೀಸತೊಡಗಿದೆ. ಅಪಾಯ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿರುವ ವರದಿಯಾಗಿದೆ. ಕೆಲವಡೆ ಭೂಕುಸಿತ ಉಂಟಾಗಿದೆ. ಮಲೆನಾಡಿನ ಸೆರಗು ಜಿಲ್ಲೆ ಹಾವೇರಿ ಜಿಲ್ಲೆಯಲ್ಲಿ ಕೂಡಾ ಮಳೆ ತೀವ್ರತೆ ಹೆಚ್ಚಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾಗಮಂಡಲ-30, ಕೊಟ್ಟಿಗೆಹಾರ, ಕಮ್ಮರಡಿ-25, ಹಂಚದಕಟ್ಟೆ-23, ಕೊಲ್ಲೂರು-22, ಪೊನ್ನಂಪೇಟೆ-21, ಸಿದ್ದಾಪುರ-20, ಭಟ್ಕಳ-18, ಖಾನಾಪುರ, ಹೊಸನಗರ, ತೀರ್ಥಹಳ್ಳಿ-17, ಲಿಂಗನಮಕ್ಕಿ, ಜಯಪುರ-16, ಜಗಲ್ ಪೇಟೆ-15, ಸಿದ್ದಾಪುರ-14, ಧರ್ಮಸ್ಥಳ, ಯಲ್ಲಾಪುರ, ಮೂಡಿಗೆರೆ, ಮಡಿಕೇರಿ, ಎನ್ ಆರ್ ಪುರ-13 ಸೆಂ ಮೀ ನಷ್ಟು ಭಾರಿ ಮಳೆ ಬಿದ್ದಿದೆ.
ಬೆಳ್ತಂಗಡಿ, ಗೇರುಸೋಪ್ಪ, ಬನವಾಸಿ, ಶೃಂಗೇರಿ, ಆಗುಂಬೆ-12, ಕುಂದಾಪುರ, ಕೊಪ್ಪ-11, ಬೆಳಗಾವಿ, ನಾಪೋಕ್ಲು, ವಿರಾಜಪೇಟೆ, ಸಕಲೇಶಪುರ-10, ಹಳಿಯಾಳ-9, ಮಂಗಳೂರು, ಸುಬ್ರಮಣ್ಯ, ಸುಳ್ಯಾ, ಕಾರ್ಕಳ, ಸೋಮವಾರಪೇಟೆ, ತ್ಯಾಗರ್ತಿ, ಸೊರಬ, ಬಾಳೆಹೊನ್ನೂರು-7, ಉಡುಪಿ, ಹೊನ್ನಾವರ, ಕಲಘಟಗಿ, ತಾಳಗುಪ್ಪ, ತರೀಕೆರೆ-6, ಮೂಲ್ಕಿ, ಕೋಟಾ, ಬೆಳಗಾವಿ, ಶಿವಮೊಗ್ಗದಲ್ಲಿ 5 ಸೆಂ ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಮತ್ತು ತಂಪಾದ ಗಾಳಿ ಬೀಸಲಿದೆ. ಕೆಲ ಪ್ರದೇಶದಲ್ಲಿ ಭಾರಿ ಮಳೆಯೂ ಬೀಳಲಿದೆ. ಕರಾವಳಿ ಪ್ರದೇಶ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಮಳೆ ಶುಕ್ರವಾರದವರೆಗೆ ಮುಂದುವರೆಯಲಿದೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಬೀಳಲಿದೆ. ಸಮುದ್ರ ತೀರದಲ್ಲಿ ಗಂಟೆಗೆ 45 ಕಿ ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಶುಕ್ರವಾರದವರೆಗೆ ಮೂಡ ಕವಿದ ವಾತಾವರಣ ಮುಂದುವರೆಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications