ಪ್ರತ್ಯೇಕ ಮೀನುಗಾರಿಕೆ ಬಂದರು ಅಗತ್ಯ: ಅಸ್ನೋಟಿಕರ್
ನವಮಂಗಳೂರು ಬಂದರು ಪ್ರಾರಂಭಿಸುವಾಗ ಮೀನುಗಾರರಿಗೆ ಪ್ರತ್ಯೇಕ ಜೆಟ್ಟಿ ನಿರ್ಮಿಸಿಕೊಡುವುದಾಗಿ ಕೇಂದ್ರ ಸರಕಾರರವು ಆಶ್ವಾಸನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಓರಿಸ್ಸಾದ ಭುವನೇಶ್ವರದಲ್ಲಿ ಆಯೋಜಿಸಲಾಗಿದ್ದ ವಿವಿಧ ರಾಜ್ಯಗಳ ಮೀನುಗಾರಿಕೆ ಸಚಿವರುಗಳ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರಾಜ್ಯದ ಮೀನುಗಾರಿಕೆ ಸಚಿವರು ಅಂತಿಮ ದಿನವಾದ ಇಂದು ಕೇಂದ್ರ ಸಚಿವರಿಗೆ ಈ ಸಂಬಂಧವಾಗಿ ಮನವಿ ಸಲ್ಲಿಸಿದರು.
ಕಾರ್ಯಗಾರದ ಅಂತಿಮ ದಿನವಾದ ಸೋಮವಾರ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ ವೇಳೆ, 'ಕಳೆದ ಎರಡು ವರ್ಷಗಳಿಂದ ರಾಜ್ಯದ ಮೀನುಗಾರರು ಮೀನುಗಾರಿಕೆಗೆ ಉಪಯೋಗಿಸುವ ಡೀಸಲ್ ಮೇಲಿನ ಅಬ್ಕಾರಿ ಶುಲ್ಕ ಮರುಪಾವತಿಯಾಗದೇ ರೂ. 12 ಕೋಟಿ ಬಾಕಿ ಉಳಿದಿದೆ. ಈ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ' ಕೇಂದ್ರ ಕೃಷಿ ಸಚಿವರಿಗೆ ಭೇಟಿಯ ವೇಳೆ ಮನವರಿಕೆ ಮಾಡಿಕೊಟ್ಟರು.
ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ನಿಗ್ರಹಿಸಲು ರಾಜ್ಯದ ಎಲ್ಲಾ ಮೀನುಗಾರರಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವುದು ಮತ್ತು ಮೀನುಗಾರಿಕಾ ದೋಣಿಗಳ ಆನ್ ಲೈನ್ ನೊಂದಣಿ ಪ್ರಸ್ತಾವನೆಗಳನ್ನು ಪರಿಗಣಿಸುವಂತೆ ಮತ್ತು ರಾಜ್ಯದ 6 ಮೀನುಗಾರಿಕಾ ಬಂದರುಗಳು ಮತ್ತು 8 ಪ್ರಮುಖ ಮೀನುಗಾರಿಕಾ ತಂಗುದಾಣಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವುದಲ್ಲದೆ ಹೂಳೆತ್ತಲು ರಾಜ್ಯಕ್ಕೆ ಅಗತ್ಯ ಅನುದಾನ ನೀಡುವಂತೆ ಕೋರಿದರು.
(ದಟ್ಸ್ ಕನ್ನಡ ವಾರ್ತೆ)