ಮಳೆಗಾಗಿ ಪೂಜೆ : ಪೂಜಾರಿಯಾದ ಸರಕಾರ
ಬೆಂಗಳೂರು, ಜು. 2 : ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುಜರಾಯಿ ಇಲಾಖೆ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಭಾರಿ ದೆಸೆ ತಿರುಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಿಗೆ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಏಕಕಾಲದಲ್ಲಿ ಪೂಜೆ, ಪರ್ಜನ್ಯ ಜಪ ಮಾಡಲು ಸರಕಾರ ಆದೇಶ ಹೊರಡಿಸಿದೆ.
ರಾಜ್ಯದ ಮುಜರಾಯಿ ಇಲಾಖೆಯಲ್ಲಿ ಬರುವ ಸುಮಾರು 34 ಸಾವಿರ ದೇವಾಲಯಗಳಲ್ಲಿ ಪೂಜೆ ನಡೆಸಬೇಕು ಎಂದು ವಸತಿ ಮತ್ತು ಮುಜರಾಯಿ ಖಾತೆ ಸಚಿವ ವಿ ಸೋಮಣ್ಣ ಆದೇಶಿಸಿದ್ದಾರೆ. ಮುಜರಾಯಿ ದೇವಸ್ಥಾನಗಳಿಗೆ ಪೂಜೆ ಉದ್ದೇಶವನ್ನು ಸ್ಪಷ್ಟಪಡಿಸಿರುವ ಸೋಮಣ್ಣ, ಈ ಸಲದ ಮುಂಗಾರು ಮಳೆ ವಿಳಂಬವಾಗಿದೆ ಮತ್ತು ರಾಜ್ಯಾದ್ಯಾಂತ ಶಾಂತಿಗಾಗಿ ಪೂಜೆ ನಡೆಸಲಾಗುವುದು ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೋಮಣ್ಣ, ಮುಂಗಾರು ವಿಳಂಬಕ್ಕಾಗಿ ಪೂಜೆ ಎಂದು ಸ್ಪಷ್ಟಪಡಿಸಿದರು. ಇದು ಎಲ್ಲರಿಗೂ ಒಳ್ಳೆಯದಾಗುವ ಕೆಲಸವಾಗಿದೆ ಎಂದರು.
ಈ ಹಿಂದೆ ಮುಜರಾಯಿ ಖಾತೆ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ ಕೂಡಾ ಶಿವರಾತ್ರಿ ಹಬ್ಬಕ್ಕೆ ರಾಜ್ಯದ ಜನತೆಗೆ ಗಂಗಾಜಲ ವಿತರಣೆ ಮಾಡಿದ್ದು, ತಿರುಪತಿ ಲಡ್ಡು ಹಂಚಿ ಹೆಸರು ಮಾಡಿದ್ದರು. ಇದಕ್ಕೆ ಪರ ವಿರೋಧಗಳು ಬಂದಿದ್ದವು. ಸೋಮಣ್ಣ ಅವರ ಕೈಗೊಂಡಿರುವ ಪೂಜೆ ಕೈಂಕರ್ಯಕ್ಕೂ ಪ್ರತಿಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.
ಅವಿವೇಕಿ ಸರಕಾರ , ಜೆಡಿಎಸ್ ವಿರೋಧ
ಸರಕಾರ ಹೊರಡಿಸಿರುವ ಪೂಜೆ ಕೈಂಕರ್ಯದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡ ವೈಎಸ್ ವಿ ದತ್ತ, ಸರಕಾರ ಸಾರ್ವಜನಿಕ ಹಣವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿದೆ. ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸರಕಾರ ಆದೇಶ ಹೊರಡಿಸಿರುವುದು ಮೂರ್ಖತನದ ಪರಮಾವಧಿ. ಅವಿವೇಕಿ ಸರಕಾರ ತೆರಿಗೆ ಹಣವನ್ನು ಪೂಜೆಗೆಂದು ಹಾಳು ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)