ಸಲಿಂಗರತಿ ಕಾನೂನು ಬಾಹಿರವಲ್ಲ, ದಿಲ್ಲಿ ಕೋರ್ಟ್
ಕಳೆದ ಏಳು ವರ್ಷದಿಂದ ಕಾನೂನು ಹೋರಾಟ ನಡೆಸುತ್ತಿದ್ದ ಸಲಿಂಗಕಾಮಿಗಳಿಗೆ ಕೊನೆಗೂ ನ್ಯಾಯಾಲಯದಿಂದ ಜಯ ಸಿಕ್ಕಿದೆ. ಸಮಾನ ಲಿಂಗಿಗಳು ತಮ್ಮ ಇಷ್ಟಾನುಸಾರ ಲೈಂಗಿಕ ಕ್ರಿಯೆ ನಡೆಸಿದರೆ ತಪ್ಪೇನಿದೆ. ಅನಗತ್ಯವಾಗಿ ಒಬ್ಬ ಹಕ್ಕನ್ನು ದಮನ ಮಾಡುವುದು ಎಷ್ಟು ಸರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಮತ್ತು ನ್ಯಾಯಮೂರ್ತಿ ಎಸ್ ಮುರಲೀಧರ್ ಅವರನ್ನು ಒಳಗೊಂಡ ಪೀಠ ಈ ಐತಿಹಾಸಿಕ ಮಹತ್ವದ ತೀರ್ಪನ್ನು ನೀಡಿದೆ. ಭಾರತೀಯ ಸಂವಿಧಾನದ ಕಲಂ 377 ಕಾಯ್ದೆ ಕ್ರಿಮಿನಲ್ ಎನ್ನುವುದಾದರೆ ಕಲಂ 21 ರ ಅಡಿಯಲ್ಲಿ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ. ಭಾರತದ ಸಂವಿಧಾನದ ಪ್ರಕಾರ ಭಾರತೀಯರಿಗೆ ಸಮಾನ ಹಕ್ಕು ನೀಡಬೇಕು. ಅವರು ಇಷ್ಟದಂತೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ದಂಡ ಸಂಹಿತೆ 377 ನೇ ವಿಧಿಗೆ ತಿದ್ದುಪಡಿ ತರುವ ಕುರಿತು ಭಾರತೀಯ ಮುಸ್ಲಿಂ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ಸಲಿಂಗ ರತಿ ಎನ್ನುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಸಲಿಂಗರತಿ ಸಕ್ರಮಗೊಳಿಸುವುದರಿಂದ ನೈತಿಕತೆ ಮತ್ತು ಧಾರ್ಮಿಕ ಆಚರಣೆಗಳು ಮೇಲೆ ದಾಳಿ ನಡೆಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದವು.
ಭಾರತೀಯ ದಂಡ ಸಂಹಿತೆ ಕಾಯ್ದೆಯ 377 ನೇ ವಿಧಿಗೆ ತಿದ್ದುಪಡಿ ತರುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ನಂತರ ತದ್ವಿರುದ್ಧವಾದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿತ್ತು. ಸಲಿಂಗ ರತಿಯನ್ನು ಸಕ್ರಮಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಈ ಮುಂಚೆ ಹೇಳಿದ್ದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಅವರು ನಂತರ ಹಾಗೇ ಹೇಳೇ ಇಲ್ಲ ಎಂದು ಹೇಳಿ ವಿವಾದದಿಂದ ಪಾರಾಗಿದ್ದರು.
(ಏಜನ್ಸೀಸ್)