ಸೋಮಣ್ಣನನ್ನು ಆಶೀರ್ವದಿಸಿದ ಸಿದ್ಧಗಂಗೆ ಶ್ರೀಗಳು
ಬೆಂಗಳೂರು, ಜೂ. 18 : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವೀರಣ್ಣ ಸೋಮಣ್ಣ ಕುಟುಂಬ ಸಮೇತ ಮಧ್ಯಾಹ್ನ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಿ ಜಗದ್ಗುರು ಶಿವಕುಮಾರ ಸ್ವಾಮೀಜಿಗಳ ಆರ್ಶೀವಾದ ಪಡೆದರು. ಜನರ ನಿರೀಕ್ಷೆ ಅರಿತು ಜನಸೇವೆ ಮಾಡಿ ಎಂದು ಶಿವಕುಮಾರ ಶ್ರೀಗಳು ಸೋಮಣ್ಣ ಅವರಿಗೆ ಕಿವಿಮಾತು ಹೇಳಿದರು.
ಗುರುವಾರ ಬೆಳಗ್ಗೆ ಸರಿಯಾಗಿ 9.15ಕ್ಕೆ ರಾಜಭವನದಲ್ಲಿ ನೂತನ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಸೋಮಣ್ಣ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೀಡುವ ಯಾವುದೇ ಖಾತೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವೆ. ತಮಗೆ ಇಂತಹದೇ ಖಾತೆ ಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಕೆಲಸ ನಿರ್ವಹಿಸಲು ಸೂಚಿಸಿದರೆ ಅದನ್ನು ನಿಭಾಯಿಸಲು ಸಿದ್ಧ ಎಂದು ಪುನರುಚ್ಚರಿಸಿದರು. ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಜನತಾ ಪರಿವಾರದಲ್ಲಿ, ನಮ್ಮ ನಾಯಕರಾದ ಜೆ ಎಚ್ ಪಟೇಲ್ ಅವರು ನನ್ನ ಮೇಲೆ ನಂಬಿಕೆ ಇಟ್ಟು ಬಂದೀಖಾನೆ ಖಾತೆಯನ್ನು ಕೊಟ್ಟರು. ಅದನ್ನು ಸಮರ್ಥವಾಗಿ ನಿರ್ವಹಿಸಿದೆ. ನನಗೆ ಮುಂದೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಲಾಯಿತು. ಈಗಲೂ ಅಷ್ಟೇ ಯಾವುದೇ ಖಾತೆ ನೀಡಿದರೂ ಅದನ್ನು ಕಾಯವಾಚ ಮನಸಾದಿಂದ ಸ್ವೀಕರಿಸಿದ ಉತ್ತಮವಾಗಿ ಜನಸೇವೆ ಮಾಡುವೆ ಎಂದು ಸೋಮಣ್ಣ ಹೇಳಿದರು.
ನಾನು ಗೋವಿಂದರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವೆ. ಗೋವಿಂದ ರಾಜ ಕ್ಷೇತ್ರದ ಜನತೆ ನನ್ನನ್ನು ದಾಖಲೆ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು. ನಾನು ಲಿಂಗಾಯಿತರ ನಾಯಕರೆಂದು ಬಿಂಬಿಸುತ್ತಿದ್ದಾರೆ. ಆದರೆ, ನಾನು ಎಂದಿಗೂ ಒಂದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ. ಸರ್ಮಧರ್ಮಗಳನ್ನು ಸಮಾನವಾಗಿ ಕಾಣುತ್ತ ಬಂದಿದ್ದೇನೆ. ಬಸವಣ್ಣನವರ ತತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ಸರ್ವಧರ್ಮಗಳ ನಾಯಕನಾಗಿ ಬೆಳೆಯಬೇಕೆಂಬುದು ನನ್ನ ಆಸೆ ಎಂದು ಸೋಮಣ್ಣ ತಮ್ಮ ಮನದಾಳವನ್ನು ಹಂಚಿಕೊಂಡರು. ಸೋಮಣ್ಣ ಅವರು ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)