ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು : ಅ.ಭಾ.ವಿ.ಪ
ಶಿವಮೊಗ್ಗ, ಜೂ. 17 : ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವುದರಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರ ಕೈವಾಡವಿದೆ. ಇದರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಿ ಹಣ ಗಳಿಕೆ ಮಾಡುತ್ತಿದ್ದಾರೆಂದು ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡುತ್ತಿದ್ದು, ಈ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅ.ಭಾ.ವಿ.ಪ. ರಾಷ್ಟ್ರೀಯ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅ.ಭಾ.ವಿ.ಪ.ಕಾರ್ಯಕರ್ತರ ಮೇಲೆ ಗಂಭೀರ ಆರೋಪ ಮಾಡುತ್ತಿದ್ದು, ರಾಜ್ಯ ಸರ್ಕಾರ ಈ ಹಿಂದೆ ನಡೆಸಿದ ಭಯೋತ್ಪಾದನಾ ವಿರೋಧಿ ಅಭಿಯಾನದಲ್ಲಿ ಕಾರ್ಯಕರ್ತರು ಅವ್ಯವಹಾರ ನಡೆಸಿ ಹಣ ಗಳಿಸಿದ್ದಾರೆ. ಹಾಗೆಯೇ, ಬೆಂಗಳೂರು ವಿವಿಯ ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದಕ್ಕೂ ಅ.ಭಾ.ವಿ.ಪ. ಕಾರ್ಯಕರ್ತರ ಮೇಲೆ ಆರೋಪ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅ.ಭಾ.ವಿ.ಪ. ಕಾರ್ಯಕರ್ತರು ಈ ಘಟನೆಗಳಲ್ಲಿ ಭಾಗಿಯಾಗಿರುವವರ ಹೆಸರುಗಳನ್ನು ಬಹಿರಂಗಪಡಿಸಿ ಅವ್ಯವಹಾರ ನಡೆಸಿದ್ದರ ಬಗ್ಗೆ ಸಾಕ್ಷ್ಯಾಧಾರಗಳು ಒದಗಿಸಿದರೆ ಅ.ಭಾ.ವಿ.ಪ ಕಛೇರಿಯನ್ನು ಮುಚ್ಚಿಸುವುದಾಗಿ ತಿಳಿಸಿದರು. ಬಾಯಿಗೆ ಬಂದಂತೆ ಇಂಥ ಹೇಳಿಕೆಗಳನ್ನು ನೀಡದೆ, ಅ.ಭಾ.ವಿ.ಪ ಸಂಘಟನೆಗೆ ಕಪ್ಪುಚುಕ್ಕಿ ಇಟ್ಟಿರುವ ಡಿ.ಕೆ.ಶಿವಕುಮಾರ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದರು.
ವಿಶ್ವವಿದ್ಯಾನಿಲಯಗಳಲ್ಲಿ ಜಾರಿಗೊಳಿಸಲಾಗಿರುವ ಸ್ವವಿತ್ತೀಯ ಸೀಟುಗಳನ್ನು ರದ್ದುಪಡಿಸಿ, ಎಲ್ಲಾ ಸೀಟುಗಳನ್ನು ಸರ್ಕಾರದ ಶುಲ್ಕಕ್ಕೆ ನೀಡಬೇಕೆಂದು ಇಲ್ಲವಾದಲ್ಲಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯ ಮಹಿಳಾ ವಿವಿಯಲ್ಲಿ ಹಲವು ಭ್ರಷ್ಟಾಚಾರ ನಡೆದಿದ್ದು, ಚಿನ್ನಪ್ಪ ವರದಿ ಮತ್ತು ವೆಂಕಟಪ್ಪ ವರದಿಗಳನ್ನು ಬಹಿರಂಗಪಡಿಸಬೇಕು. ಹಾಗೆಯೇ, ರಿಜಿಸ್ಟ್ರಾರ್ ಮತ್ತು ಡಾ|.ಸಹೀದಾ ಅಕ್ತರ್ರವರನ್ನು ಕೆಲಸಕ್ಕೆ ಮರುನೇಮಕ ಮಾಡಲಾಗಿದ್ದು, ಅವರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯಮಟ್ಟದ ತರಬೇತಿ ಶಿಬಿರ
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಮಟ್ಟದ ಕಾರ್ಯಕರ್ತರ ಪ್ರಶಿಕ್ಷಣ ಕಾರ್ಯಕ್ರಮವನ್ನು ಜೂ.22ರಿಂದ 25ರವರೆಗೆ ಏರ್ಪಡಿಸಲಾಗಿದೆ.
ಅಭ್ಯಾಸ ವರ್ಗದಲ್ಲಿ ರಾಜ್ಯದಿಂದ ಆಯ್ಕೆಮಾಡಿದ 350 ಕಾರ್ಯಕರ್ತರಿಗೆ ಅ.ಭಾ.ವಿ.ಪ.ದ ಸೈದ್ಧಾಂತಿಕ ಆಧಾರ, ಕಾರ್ಯಶೈಲಿ, ಕ್ಯಾಂಪಸ್ಗಳಲ್ಲಿ ಅ.ಭಾ.ವಿ.ಪ.ದ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕಾರ್ಯಕ್ರಮಗಳಿಂದ ಕಾರ್ಯಕರ್ತರನ್ನು ವಿಕಾಸಗೊಳಿಸುವುದು ಹೇಗೆ? ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿ ಜೊತೆಗೆ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯನ ಪಟ್ಟಾಭಿಷೇಕವಾಗಿ 500 ವರ್ಷದ ಸ್ಮರಣೆಗೆ ಮತ್ತು ಅ.ಭಾ.ವಿ.ಪ.ಕ್ಕೆ 60ವರ್ಷಗಳು ತುಂಬಿದ ಸಂದರ್ಭದಲ್ಲಿ ಎರಡು ವಿಶೇಷ ಕಾರ್ಯಕ್ರಮವನ್ನು ಯೋಜಿಸಲಾಗಿದೆ.