ಬೆಂಗಳೂರಿನಲ್ಲಿ ನ್ಯಾಯಾಧೀಶರತ್ತ ಚಪ್ಪಲಿ ಎಸೆತ
ಬೆಂಗಳೂರು, ಮೇ. 30 : ಚಪ್ಪಲಿ ಹಾಗೂ ಬೂಟುಗಳ ಹಾರಾಟ ಇತ್ತೀಚೆಗೆ ಪ್ರತಿಭಟನೆ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, ಈವರೆಗೂ ಅದರ ಏಟು ತಿಂದದ್ದು ಬರೀ ಘಟಾನುಘಟಿ ರಾಜಕಾರಣಿಗಳು ಎನ್ನುವುದು ವಿಶೇಷಲಾಗಿತ್ತು. ಆದರೆ, ಇಂದು ಬೆಂಗಳೂರಿನ ಡಬ್ಬಲ್ ರಸ್ತೆಯಲ್ಲಿರುವ ಕಾರ್ಮಿಕರ ನ್ಯಾಯಾಲಯದಲ್ಲಿ ನ್ಯಾಯಧೀಶರತ್ತ ವ್ಯಕ್ತಿಯೊಬ್ಬ ಚಪ್ಪಲಿ ಎಸೆದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ವಿರುದ್ಧ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆರೋಪಿ ಬಿಹಾರ್ ಮೂಲದ ನಂದಾಲಾಲ್ ಎಂಬುವವನು ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಂದಾಲಾಲ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಕಳೆದ 20 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ವಿರುದ್ಧ ಲೇಬರ್ ನ್ಯಾಯಾಲಯದಿಂದ ಹೊರಬಂದಿತ್ತು. ಇದರಿಂದ ಕೆರಳಿದ ನಂದಾಲಾಲ್ ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದಾನೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
ಚಪ್ಪಲಿ ಮತ್ತು ಬೂಟು ಎಸೆತಗಳ ಭರಾಟೆ ಆರಂಭವಾಗಿದ್ದು ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರಿಂದ. ಅಲ್ಲಿಂದ ಶುರುವಾದ ಈ ಪೀಡೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ, ಗೃಹ ಸಚಿವ ಪಿ ಚಿದಂಬರಂ, ನವೀನ ಜಿಂದಾಲ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಇದರ ಬಿಸಿ ತಾಗಿದೆ.
(ದಟ್ಸ್ ಕನ್ನಡ ವಾರ್ತೆ)