ಅಡ್ವಾಣಿ ಅಂಗರಕ್ಷಕ ಅಪಘಾತದಲ್ಲಿ ಸಾವು
ಬೆಂಗಳೂರು, ಮೇ. 29 : ಮೂಡುಬಿದಿರೆಯ ಹಂಡೇಲು ಮಸೀದಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬ್ಲಾಕ್ ಕ್ಯಾಟ್ ಕಮಾಂಡೋ ಶೇಖರ ಎಲ್ ರಾಥೋಡ್ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರ ಅಂಗರಕ್ಷಕರಾಗಿದ್ದರು.
ಮೂಲತಃ ಬಾಗಲಕೋಟೆ ನಿವಾಸಿಯಾಗಿರುವ ಶೇಖರ್, ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ತಮ್ಮ ಸೊಸೆಯನ್ನು ನೋಡಿಹೋಗಲೆಂದು ನಗರಕ್ಕೆ ಆಗಮಿಸಿದ್ದರು. ಬಸ್ಸಿನಲ್ಲಿ ಬಂದ ಶೇಖರ್ ಇಳಿಯಬೇಕಾದ ನಿಲ್ದಾಣ ತಪ್ಪಿ ಹಂಡೇಲಿನಲ್ಲಿ ಇಳಿದು, ಅಲ್ಲಿಂದ ಆಳ್ವಾಸ್ ಕಾಲೇಜಿನ ನಡೆದುಕೊಂಡು ಹೋಗುತ್ತಿದ್ದಾಗ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದಲ್ಲಿ ತಲೆಗೆ ಭಾರಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಡಿಕ್ಕಿ ಹೊಡೆದ ವಾಹಗದ ಗುರುತು ಪತ್ತೆಯಾಗಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications