ಕೇಂದ್ರದ ಸಂಪುಟ ಮೇ 28ಕ್ಕೆ ವಿಸ್ತರಣೆ
ನವದೆಹಲಿ, ಮೇ. 26 : ಖಾತೆ ಹಂಚಿಕೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಇಂದು ವಿಸ್ತರಣೆಯಾಗಬೇಕಿದ್ದ ಕೇಂದ್ರದ ಸಚಿವ ಸಂಪುಟವನ್ನು ಗುರುವಾರ (ಮೇ 28) ರಂದು ವಿಸ್ತರಣೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ನಡೆಸಿದ ಚರ್ಚೆಯಲ್ಲಿ ಇನ್ನೆರಡು ದಿನ ಸಂಪುಟ ವಿಸ್ತರಣೆ ಕಾರ್ಯಕ್ರಮವನ್ನು ಮುಂದೂಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕಮಲ್ ನಾಥ್, ಕಪಿಲ್ ಸಿಬಲ್ ಅವರಿಗೆ ಯಾವ ಖಾತೆ ನೀಡಬೇಕು ಎನ್ನುವುದು ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಮಧ್ಯೆ ಯುಪಿಎ ಅಂಗಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಎನ್ ಸಿಪಿ ಹಾಗೂ ಡಿಎಂಕೆ ಪಕ್ಷಗಳು ಹೆಚ್ಚು ಸಂಖ್ಯೆಯ ಸ್ಥಾನಗಳಿಗೆ ಪಟ್ಟುಹಿಡಿದಿರುವುದು ಸಮಸ್ಯೆ ಇನ್ನಷ್ಟು ಜಟಿಲವಾಗಿದೆ.
ಶನಿವಾರ ಸಂಜೆ ನಾಲ್ಕು ಗಂಟೆಗಳ ಕಾಲ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ಪ್ರಣಬ್ ಮುಖರ್ಜಿ ಚರ್ಚೆ ನಡೆಸಿದರೂ, ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಸೋಮವಾರ ಸಹ ಚರ್ಚೆ ನಡೆಸಿದರೂ ಫಲಿತಾಂಶ ಮಾತ್ರ ಶೂನ್ಯವಾದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
(ಏಜನ್ಸೀಸ್)