ಭದ್ರಾವತಿಯಲ್ಲಿ ಮರುಕಳಿಸಿರುವ ಚಿಕೂನ್ ಗುನ್ಯಾ
ಶಿವಮೊಗ್ಗ, ಮೇ 19 : ಚಿಕೂನ್ ಗುನ್ಯಾ ಭದ್ರಾವತಿಯಲ್ಲಿ ಮತ್ತೆ ಮರುಕಳಿಸಿದ್ದು, ಕಳೆದ ಒಂದು ವಾರದ ಹಿಂದೆ ಮೈದೊಳಲು ಹಾಗೂ ಮಂಗೋಟೆ ಗ್ರಾಮದ ಇಬ್ಬರು ಈ ಚಿಕೂನ್ ಗುನ್ಯಾಕ್ಕೆ ಬಲಿಯಾಗಿರುವುದು ಸರ್ಕಾರಿ ಆಸ್ಪತ್ರೆಯಲ್ಲಿ ದೃಢಪಟ್ಟಿದೆ.
ಚಿಕೂನ್ ಗುನ್ಯಾ ಲಕ್ಷಣಗಳನ್ನು ಹೊಂದಿದ್ದ ಈ ಇಬ್ಬರು ರೋಗಿಗಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡು, ವಿವಿಧ ತಪಾಸಣೆಗಳ ಮೂಲಕ ಚಿಕಿತ್ಸೆಗೊಳಪಡಿಸಲಾಗಿದೆ. ಈ ಚಿಕೂನ್ ಗುನ್ಯಾವು ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲದೆ ನಗರದ ಹಲವು ಭಾಗಗಳಲ್ಲಿಯೂ ಹರಡಿದ್ದು, ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೆ ಮರುಕಳಿಸಿರುವ ಚಿಕೂನ್ ಗುನ್ಯಾಕ್ಕೆ ಭದ್ರಾವತಿ ಸಾರ್ವಜನಿಕರು ನಗರ ಸಭೆಯ ಮೇಲೆ ಕಿಡಿಕಾರಿದ್ದಾರೆ. ಆಗಾಗ್ಗೆ ಬೀಳುತ್ತಿರುವ ಮಳೆಯಿಂದ ನೀರು ಸರಾಗವಾಗಿ ಹರಿಯಲು ಸ್ಥಳವಿಲ್ಲದೆ ಅಲ್ಲಲ್ಲಿ ನಿಂತು ಸೊಳ್ಳೆಗಳು ಹೆಚ್ಚಾಗುತ್ತಿವೆ. ಈ ಸೊಳ್ಳೆಗಳೇ ಇಂತಹ ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತಿದ್ದು, ನಗರಸಭೆ ಅಧಿಕಾರಿಗಳು ರೋಗ ಹರಡದಂತೆ ಔಷಧಿ ಸಿಂಪಡಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಚುನಾವಣೆಯ ನೆಪ ಹೇಳಿ, ಸ್ವಚ್ಛತಾ ಕೆಲಸಗಳನ್ನು ಕೈಬಿಟ್ಟಿದ್ದ ಅಧಿಕಾರಿಗಳು ಈಗಲಾದರೂ ತಮ್ಮ ಕೆಲಸದ ಜವಾಬ್ದಾರಿ ತೆಗೆದುಕೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನಿಂದ ಮತದಾರರ ಅಭಿನಂದನೆ
ಯುಪಿಎ ನೇತೃತ್ವದ ಹೊಸ ಸರ್ಕಾರ ರಚಿಸುವುದಕ್ಕೆ ಜನತೆ ತೀರ್ಪನ್ನು ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ಮುಂದಾಳತ್ವ ವಹಿಸಿದ ಸೋನಿಯಾ ಗಾಂಧಿ, ರಾಹುಲ್ ಮತ್ತು ಮನಮೋಹನ್ ಸಿಂಗ್ರವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಭಿನಂದನೆ ಸಲ್ಲಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ನೀಡಿರುವ ತೀರ್ಪೇ ಅಂತಿಮವಾಗಿದ್ದು, ಆ ಉದ್ದೇಶಕ್ಕಾಗಿ ಮತ ಕೊಟ್ಟಂತಹ ಮತ ಬಾಂಧವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಚುನಾವಣೆಯಲ್ಲಿ ದುಡಿದ ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರು ಹಾಗೂ ಜಿಲ್ಲೆಯಲ್ಲಿ ಜೆಡಿಎಸ್ನ ಅಭ್ಯರ್ಥಿ ಚುನಾವಣೆಯಲ್ಲಿ ನಿಲ್ಲಿಸದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ ಜೆಡಿಎಸ್ನ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಶ್ರೀಕಾಂತ್ರವರಿಗೂ ಮತ್ತು ಪಕ್ಷದ ಮುಖಂಡರಿಗೂ ಕಾರ್ಯಕರ್ತರಿಗೂ ಅಭಿನಂದಿಸುತ್ತಿರುವುದಾಗಿ ಹೇಳಿದರು.
ಬಿಜೆಪಿಯ ರಾಘವೇಂದ್ರ ಅವರ ವಿರುದ್ಧ ಬಂಗಾರಪ್ಪ ಸೋಲಲು ಪ್ರಚಾರ ಕಾರ್ಯ ತಡವಾಗಿ ಪ್ರಾರಂಭಿಸಿದ್ದೇ ಪ್ರಮುಖ ಕಾರಣ. ಆದರೆ, ಮೆಚ್ಚಬೇಕಾದ ವಿಷಯ ಏನೆಂದರೆ ಹಣ ಹೆಂಡ ಹಂಚದೆ ಬಂಗಾರಪ್ಪ ಇಷ್ಟು ಮತ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದರು.
ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭದ್ರಾವತಿಯಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ವಿರೋಧದ ನಡುವೆಯೂ ಪಕ್ಷ ಉತ್ತಮವಾಗಿ ಮತಗಳಿಸಿದೆ. ಆದರೆ, ಸೊರಬ ಹಾಗೂ ಬೈಂದೂರು ಕ್ಷೇತ್ರದಲ್ಲಿ ಮತದಾರರು ಕೈಕೊಟ್ಟರು. ಜೊತೆಗೆ ಬಂಗಾರಪ್ಪರವರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಲಿಲ್ಲ. ಆದ್ದರಿಂದಲೇ ಪಕ್ಷ ಸೋಲುವಂತಾಯಿತು ಎಂದು ವಿಶ್ಲೇಷಿಸಿದರು. ಗೋಷ್ಠಿಯಲ್ಲಿ ಕಲಗೋಡು ರತ್ನಾಕರ್, ಸತ್ಯನಾರಾಯಣ್, ಎಸ್.ಪಿ. ದಿನೇಶ್, ರಾಮೇಗೌಡ, ಯುವ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಪ್ರವೀಣ್ ಪಟೇಲ್, ಅಡ್ಡು ಮುಂತಾದವರು ಹಾಜರಿದ್ದರು.











Click it and Unblock the Notifications