4ನೇ ಹಂತ : ನಂದಿಗ್ರಾಮದಲ್ಲಿ ಹಿಂಸಾಚಾರ
ನಂದಿಗ್ರಾಮ (ಪಶ್ಚಿಮ ಬಂಗಾಲ), ಮೇ. 7 : ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಬಹುತೇಕ ಕಡೆಯಲ್ಲಿ ಶಾಂತಿಯುತವಾಗಿ ಸಾಗಿದ್ದು, ಆದರೆ, ಪಶ್ಚಿಮ ಬಂಗಾಲದ ನಂದಿಗ್ರಾಮದಲ್ಲಿ ಮಾತ್ರ ಹಿಂಸಾಚಾರ ನಡೆದ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಲದ ತಮ್ಲಕ್ ಲೋಕಸಭೆ ಕ್ಷೇತ್ರದಲ್ಲಿ ಮತಗಟ್ಟೆಯೊಂದರ ಮೇಲೆ ದಾಳಿ ನಡೆದಿದ್ದು, ನಾಡ ಬಾಂಬ್ ನ್ನು ಸ್ಪೋಟಿಸಲಾಗಿದೆ. ಇದರಿಂದ ಮತಗಟ್ಟೆಯಲ್ಲಿದ್ದ ಇಬ್ಬರು ಸಿಪಿಎಂ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಮ್ಲಕ್ ಲೋಕಸಭೆ ಕ್ಷೇತ್ರದ ಗೋಕುಲ್ ನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆ ತಿಳಿಯುತ್ತಿದ್ದಂತೆಯೇ ಗ್ರಾಮವನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಇದೀಗ ಸಂಪೂರ್ಣ ಹತೋಟಿಗೆ ಬಂದಿದೆ. ನಂದಿಗ್ರಾಮದ ಗೋಕುಲ್ ನಗರ ಹಾಗೂ ಪ್ರಣಬ್ ಮುಖರ್ಜಿ ಸ್ಪರ್ಧಿಸಿರುವ ಕ್ಷೇತ್ರವಾದ ಜಂಗೀಪುರ್ ದಲ್ಲಿ ಕೂಡಾ ಮತಗಟ್ಟೆ ಮೇಲೆ ದಾಳಿ ನಡೆದಿದ್ದು, ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ. ಆದರೆ, ಮತದಾನ ಕಾರ್ಯ ಸ್ಥಗಿತಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ತಮ್ಲಕ್ ಹಾಗೂ ಜಂಗೀಪುರ್ ಕ್ಷೇತ್ರದ ಕಡೆಗೆ 500 ಕೇಂದ್ರಿಯ ಭದ್ರತಾ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ತಮ್ಲಕ್ ಲೋಕಸಭೆ ಕ್ಷೇತ್ರದಲ್ಲಿ ಶೇ. 20 ರಷ್ಟು ಮತದಾನವಾಗಿದೆ.
(ಏಜನ್ಸೀಸ್)
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು