ನೇಪಾಳದ ಬಿಕ್ಕಟ್ಟಿಗೆ ಭಾರತ ಕಾರಣವಲ್ಲ: ಪ್ರಣಬ್
ನವದೆಹಲಿ, ಮೇ. 5 : ನೇಪಾಳದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಭಾರತವೇ ಕಾರಣ ಎಂದು ಅಲ್ಲಿನ ಮಾವೋವಾದಿ ಮುಖಂಡರು ಆರೋಪಿಸಿದ್ದಾರೆ. ಸೇನಾಪಡೆಯ ಮುಖ್ಯಸ್ಥ ರುಕ್ಮಾಂಗದ ಕಟವಾಲ್ ಅವರನ್ನು ಪದಚ್ಯುತಿಗೊಳಿಸಲು ಭಾರತ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಪ್ರಚಂಡ ಈ ಕ್ರಮ ಕೈಗೊಂಡಿದ್ದಾರೆ ಎನ್ನುವ ದೂರನ್ನು ಭಾರತ ಸ್ಪಷ್ಟವಾಗಿ ಅಲ್ಲಗೆಳೆದಿದೆ.
ಭಾರತ ಎಂದಿಗೂ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಕೈಹಾಕುವುದಿಲ್ಲ. ನೇಪಾಳದಲ್ಲಿ ನಡೆದಿರುವುದು ಆ ದೇಶದ ಆಂತರಿಕ ವಿಷಯವಾಗಿದ್ದು, ಇದರಲ್ಲಿ ನಮ್ಮ ಕೈವಾಡ ಇರಲಿ ಹೇಗೆ ಸಾಧ್ಯ ಎಂದು ಭಾರತದ ವಿದೇಶಾಂಗ ಸಚಿವನ ಪ್ರಣಬ್ ಮುಖರ್ಜಿ ಸ್ಪಷ್ಚಪಡಿಸಿದ್ದಾರೆ. ನೇಪಾಳದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಶೀಘ್ರ ಶಮನಗೊಂಡ ಶಾಂತಿಯುತ ಪ್ರಜಾಪ್ರಭುತ್ವ ನೆಲೆಗೊಳ್ಳಲಿದೆ ಎಂದು ಮುಖರ್ಜಿ ಆಶಾಭಾವ ವ್ಯಕ್ತಪಡಿಸಿದರು.
ಸೇನಾಪಡೆಯ ಮುಖ್ಯಸ್ಥ ರುಕ್ಮಾಂಗದ ಕಟವಾಲ್ ಅವರ ಅಮಾನತು ಪ್ರಕರಣದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನಿಂದ ನೇಪಾಳ ಪ್ರಧಾನಮಂತ್ರಿ ಪುಷ್ಪಕಮಲ್ ದಾಹಲ್ ಅಲಿಯಾಸ್ ಪ್ರಚಂಡ ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು.
ನೇಪಾಳದಲ್ಲಿ ಪ್ರಚಂಡ ವಿರುದ್ದ ತೀವ್ರ ಪ್ರತಿಭಟನೆ ಆರಂಭವಾಗಿದ್ದು, ಪ್ರಧಾನಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನಂತರ ವಾರ್ತಾ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೇಪಾಳ ಅಧ್ಯಕ್ಷ ರಾಮ್ ಬಾರನ್ ಯಾದವ್ ಅವರ ಹಿಟ್ಲರ್ ನೀತಿಯಿಂದಾಗಿ ದೇಶದಲ್ಲಿ ಅಶಾಂತಿ ಉಂಟಾಗಿದೆ ಎಂದು ಪ್ರಚಂಡ ಆರೋಪಿಸಿದ್ದರು.
(ಏಜನ್ಸೀಸ್)
ನೇಪಾಳದ ಪ್ರಧಾನಿ ಪ್ರಚಂಡ ರಾಜೀನಾಮೆ