ಅಂಬಾನಿ ಹತ್ಯೆಗೆ ಸಂಚು : ಇಬ್ಬರು ಬಂಧನ
ನವದೆಹಲಿ, ಮೇ. 4 : ಉದ್ಯಮಿ ಅನಿಲ್ ಅಂಬಾನಿ ಅವರ ಕ್ಯಾಪ್ಟರ್ ನಲ್ಲಿ ಕಲ್ಲು ಮತ್ತು ಮರಳು ತುಂಬಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧಿ ವಿಭಾಗದ ಪೊಲೀಸರು ಏರ್ ವರ್ಕ್ಸ್ ಸಂಸ್ಥೆ ಇಬ್ಬರು ನೌಕರರನ್ನು ಬಂಧಿಸಿದ್ದಾರೆ. ಕಾರ್ಪೋರೇಟ್ ವಲಯದ ವೈಷಮ್ಯ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಪೊಲೀಸರು, ಈ ಹಿಂದೆ ಬಂಧಿಸಿದ್ದ ಮೂವರು ರಿಲೈಯನ್ಸ್ ಸಂಸ್ಥೆಯ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ್ದಾರೆ.
ಏರ್ ವರ್ಕ್ಸ್ ಸಂಸ್ಥೆಯ ಉದಯ್ ವಾರೇಕರ್ ಹಾಗೂ ಪಾಲರಾಜ್ ತೇವಾರಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಏರ್ ವರ್ಕ್ಸ್ ಸಂಸ್ಥೆ ಅನಿಲ್ ಅಂಬಾನಿ ಅವರ ಕ್ಯಾಪ್ಟರ್ ರಿಪೇರಿಗೆ ಸಂಬಂಧಿಸಿದಂತೆ ಗುತ್ತಿಗೆ ಪಡೆದುಕೊಂಡಿತ್ತು. ಏರ್ ವರ್ಕ್ಸ್ ಸಂಸ್ಥೆ ಹಾಗೂ ಅನಿಲ್ ಅಂಬಾನಿ ನಡುವೆ ಉಂಟಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಏರ್ ವರ್ಕ್ಸ್ ಸಂಸ್ಥೆಯ ಇಬ್ಬರು ನೌಕರರು ಅನಿಲ್ ಅಂಬಾನಿ ಅವರ ಕ್ಯಾಪ್ಟರ್ ಗೆ ಇಂಧನದ ಬದಲು ಕಲ್ಲು ಮತ್ತು ಮರಳು ತುಂಬಿ ಅಂಬಾನಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು.
ಇಂಧನ ಟ್ಯಾಂಕ್ ನಲ್ಲಿ ಕಲ್ಲು ಮರಳು ತಂಬಿರುವುದನ್ನು ಪತ್ತೆ ಹಚ್ಚಿದ್ದ ಅವರ ಕ್ಯಾಪ್ಟರ್ ನ ಚಾಲಕ ಭರತ್ ಬೋರ್ಗೆ ಅವರನ್ನು ಅನುಮಾನಾಸ್ಪದವಾಗಿ ಹತ್ಯೆಗೀಡಾಗಿದ್ದರು. ಬೋರ್ಗೆ ಅವರನ್ನು ಕೊಂದು ಅಂಧೇರಿಯ ರೈಲು ನಿಲ್ದಾಣದಲ್ಲಿ ಎಸೆಯಲಾಗಿತ್ತು. ಅನಿಲ್ ಅಂಬಾನಿಯವರು 13 ಸೀಟುಗಳುಳ್ಳ ಬೆಲ್ 412 ಕ್ಯಾಪ್ಟರ್ ನ್ನು ಖಾಸಗಿಯಾಗಿ ಉಪಯೋಗಿಸುತ್ತಾರೆ.
(ಏಜನ್ಸೀಸ್)
ಅಂಬಾನಿ ಹತ್ಯೆ ಸಂಚು, ಪ್ರಮುಖ ಸಾಕ್ಷಿ ಸಾವು