ಎರಡು ಜೋಡಿ ಯುವಪ್ರೇಮಿಗಳ ದುರಂತ ಅಂತ್ಯ
ಎರಡೂ ಘಟನೆಗಳಲ್ಲಿ ಸಾಮ್ಯತೆಯೇನೆಂದರೆ ಎರಡೂ ಜೋಡಿಗಳು ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದರಲ್ಲಿ ಒಂದು ಜೋಡಿ ಬಾರ್ಕೂರಿನಲ್ಲಿ ಸತ್ತಿದ್ದರೆ, ಇನ್ನೊಂದು ಜೋಡಿ ಬದುಕುಳಿದೂ ಸತ್ತಂತಾಗಿದ್ದಾರೆ. ದುರಾದೃಷ್ಟವೆಂದರೆ, ಯುವಪ್ರೇಮಿಗಳು ರೈಲಿನ ಒಂದು ಹಳಿಯಂತಾದರೆ, ಮದುವೆಗೆ ಆಕ್ಷೇಪಿಸಿದ ಹಿರಿಯರು ಇನ್ನೊಂದು ಹಳಿಯಾಗಿದ್ದಾರೆ.
ಗುಲಬರ್ಗಾ ಜೋಡಿ : ಗುಲಬರ್ಗಾ ಜಿಲ್ಲೆಯ ಆಳಂದದ ಶ್ರೀಕಾಂತ್ ಮತ್ತು ನಾಗವೇಣಿ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಮದುವೆಯಾಗಬಯಸಿದ್ದರು. ಅವರ ಮದುವೆಗೆ ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮದುವೆಗೆ ಹಿರಿಯರ ಅನುಮತಿ ದೊರೆಯುವುದಿಲ್ಲವೆನ್ನುವುದನ್ನು ಅರಿತ ಯುವಪ್ರೇಮಿಗಳು ಮದುವೆಯಾಗಿ ಹೊಸಜೀವನ ನಡೆಸಲು ಬೆಂಗಳೂರಿಗೆ ಬಂದಿದ್ದಾರೆ. ತಾವೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಮದುವೆಗೆ ವಿಘ್ನ ಎದುರಾಗಿದೆ.
ಬದುಕಿ ಪ್ರಯೋಜನವಿಲ್ಲವೆಂದು ನಿನ್ನೆ ರಾತ್ರಿ ಮಂಗಳಾ ಎಕ್ಸ್ ಪ್ರೆಸ್ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳಲು ಇಬ್ಬರೂ ನಿರ್ಧರಿಸಿದ್ದಾರೆ. ಆದರೆ, ಕೊನೆ ಗಳಿಗೆಯಲ್ಲಿ ಮನಸು ಬದಲಾಯಿಸಿದ್ದಾರೆ. ಅಷ್ಟರಲ್ಲಿ ಶ್ರೀಕಾಂತನ ಕಾಲು ರೈಲು ಹಳಿ ಮಧ್ಯ ಸಿಕ್ಕಿಕೊಂಡಿದ್ದರಿಂದ ರೈಲು ಆತನ ಮೇಲೆ ಹರಿದು ಎರಡೂ ಕಾಲುಗಳು ಕತ್ತರಿಸಿವೆ. ನಾಗವೇಣಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ. ಈಗ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ಕಾರಣಕ್ಕಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬಾರ್ಕೂರು ಜೋಡಿ : ಬಾರ್ಕೂರಿನ ಇನ್ನೊಂದು ಯುವಪ್ರೇಮಿಗಳಾದ ರಾಘವೇಂದ್ರ ಮತ್ತು ಸುಷ್ಮಾ ಅವರು ಕೂಡ ತಮ್ಮ ಮದುವೆಗೆ ಎರಡೂ ಕುಟುಂಬದ ಹಿರಿಯಲು ಅಡ್ಡಬಂದಿದ್ದರಿಂದ ಬಾರ್ಕೂರಿನಲ್ಲಿ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ದೇಹಗಳು ಛಿದ್ರಛಿದ್ರವಾಗಿವೆ. ಸುಷ್ಮಾ ಇನ್ನೂ ಪ್ರಾಪ್ತವಯಸ್ಕಳಾಗಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬ್ರಹ್ಮಾವರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)