ಬಿಜೆಪಿ ನಿರ್ನಾಮಕ್ಕೆ ಪ್ರತಿಪಕ್ಷಗಳ ಸಂಕಲ್ಪ
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿರುವ ಬಿಜೆಪಿ ಸರಕಾರ ಅತ್ಯಂತ ಕೆಟ್ಟ ಸರಕಾರ. ಯಡಿಯೂರಪ್ಪ ನೇತೃತ್ವದ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಭ್ರಷ್ಟಾಚಾರ ಮೀತಿಮೀರಿದೆ. ಕೋಮುಗಲಭೆಯಿಂದ ಒಂದು ಕೋಮಿನ ಜನಾಂಗ ಭಯದಲ್ಲಿ ಜೀವನ ನಡೆಸಬೇಕಾದ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯನ್ನು ರಾಜ್ಯದಿಂದ ಓಡಿಸುವುದು ನಮ್ಮ ಏಕೈಕ ಕಾರ್ಯಕ್ರಮ. ಈ ಪಕ್ಷ ಹಾಗೂ ಸರ್ಕಾರವನ್ನು ರಾಜ್ಯದಿಂದ ತೆಗೆದುಹಾಕಲು ಜಾತ್ಯಾತೀತ ನಿಲುವು ಹೊಂದಿರುವ ಎಲ್ಲ ಪಕ್ಷಗಳೊಂದಿಗೂ ನಾವು ಕೈಜೋಡಿಸುತ್ತೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷದೊಂದಿಗೆ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಅವರು, ಮಂಡ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ ಎಂದು ಅವರು ಆರೋಪಿಸಿದರು.
ಮಂಡ್ಯ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಅವರಿಗೆ ಮತ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕರೆಕೊಟ್ಟಿರುವುದು ಗುಟ್ಟಾಗೇನು ಉಳಿದಿಲ್ಲ. ಮಂಡ್ಯದಲ್ಲಿ ಜೆಡಿಎಸ್ ಸೋಲಿಸಲು ಬಿಜೆಪಿ ಬೃಹತ್ ನಾಟಕವಾಡುತ್ತಿರುವುದು ನಮಗೇನು ಗೊತ್ತಿಲ್ಲ ಅಂತ ತಿಳಿದಿದ್ದಾರೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದಕ್ಕೆ ಸ್ಪಷ್ಟ ಕಾರಣವಿದೆ. ಬಿಜೆಪಿ ಆಡಳಿತ ಪಕ್ಷ ಹಾಗೂ ಗಣಿಗಾರಿಕೆಯ ಅಕ್ರಮ ಹಣವನ್ನು ಅಲ್ಲಿನ ನಾಯಕರು ನೀರಿನಂತೆ ಚೆಲ್ಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮುಂದೆ ನಮಗೆ ಸ್ಪರ್ಧಿಸಿ ಅಷ್ಟೊಂದು ಹಣ ಖರ್ಚು ಮಾಡಲು ಇಲ್ಲದಿರುವುದರಿಂದ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ವಿವರಿಸಿದರು.
ದೇಶಪಾಂಡೆ ಸಮರ್ಥನೆ
ಕುಮಾರಸ್ವಾಮಿ ಅವರ ಮಾತಿಗೆ ಧ್ವನಿಗೂಡಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಬಿಜೆಪಿ ಸರಕಾರವನ್ನು ಕಿತ್ತೆಸೆಯಲು ನಾವು ಕೈಜೋಡಿಸುತ್ತೇವೆ ಎಂದು ಹೇಳಿದ್ದಾರೆ. ಬಿಜೆಪಿ ಸರಕಾರದ ಆಡಳಿತದಿಂದ ರಾಜ್ಯದಲ್ಲಿ ಅಶಾಂತಿ ಮನೆಮಾಡಿದೆ. ಆದ್ದರಿಂದ ಈ ಸರಕಾರವನ್ನು ಕೂಡಲೇ ತೆಗೆದುಹಾಕಬೇಕು ಎಂದರು.
(ದಟ್ಸ್ ಕನ್ನಡ ವಾರ್ತೆ)