ಧರಂಗೆ ಸೇರಿದ 10 ಲಕ್ಷ ರು. ನಗದು ವಶ!

ಆಘಾತಕಾರಿ ಸಂಗತಿಯೆಂದರೆ, ಬೀದರಿನಲ್ಲಿ ವಶಪಡಿಸಿಕೊಳ್ಳಲಾದ 10 ಲಕ್ಷ ರು. ನಗದು ಸೇರಿರುವುದು ಗುಲಬರ್ಗಾ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರಿಗೆ ಸೇರಿದ್ದು!
ಜಿಲ್ಲಾಧಿಕಾರಿ ಹರ್ಷ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 10 ಲಕ್ಷ ರು. ನಗದು ಸಾಗಿಸುತ್ತಿದ್ದ ಕಾರು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಚಾಲಕ ಪರಾರಿಯಾಗಿದ್ದಾನೆ. ವಿಚಾರಣೆಯಲ್ಲಿ ನಗದು ಸೇರಿರುವುದು ಧರಂಸಿಂಗ್ ಅವರಿಗೆ ಎಂಬ ಸಂಗತಿಯನ್ನು ಬಂಧಿತರು ಬಹಿರಂಗಪಡಿಸಿದ್ದಾರೆ.
ನಗದನ್ನು ಕವರುಗಳಲ್ಲಿ ಇಡಲಾಗಿತ್ತು ಮತ್ತು ಕವರಿನ ಮೇಲೆ ತಪುಪಿಸಬೇಕಾದವರ ಹೆಸರು ಕೂಡ ನಮೂದಿಸಲಾಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.
43 ಲಕ್ಷ ರು. ನಗದು ವಶ : ಮತ್ತೊಂದು ಘಟನೆಯಲ್ಲಿ ನಂಜನಗೂಡಿನ ಬಳಿ ಕೇರಳ ಮೂಲದ ವ್ಯಕ್ತಿಯಿಂದ ದಾಖಲೆಯಿಲ್ಲದ 43 ಲಕ್ಷ ರು. ನಗದನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ವಿಚಾರಣೆ ಕೂಡ ಮುಂದುವರಿದಿದೆ.
ಅಕ್ರಮ ಅವ್ಯಾಹತ : ರಾಜ್ಯ ಚುನಾವಣಾ ಆಯೋಗ ಜಿಲ್ಲಾಡಳಿತಗಳ ಸಹಾಯದಿಂದ ಅಕ್ರಮ ತಡೆಯಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ನೀತಿ ಸಂಹಿತೆ ಉಲ್ಲಂಘನೆ ಮತ್ತು ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಆಯೋಗ ಚಾಪೆ ಕೆಳಗೆ ನುಗ್ಗಿದರೆ, ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳುವ ಚಾಕಚಕ್ಯತೆ ತೋರುತ್ತಿದ್ದಾರೆ.
ಆದರೂ, ಆಯೋಗ ದಕ್ಷವಾಗಿ ಕಾರ್ಯಾಚರಣೆ ನಡೆಸಿರುವುದರಿಂದ ದಾಖಲೆ ಮಟ್ಟದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿರುವ ಮತ್ತು ಅಕ್ರಮ ನಡೆದಿರುವ ಪ್ರಕರಣಗಳು ದಾಖಲಾಗಿವೆ. ಈ ವಿವರವನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಎಂಎನ್ ವಿದ್ಯಾಶಂಕರ್ ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 373 ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಬಿಜೆಪಿಯದು ಸಿಂಹಪಾಲು. ಒಟ್ಟು 1454 ಚುನಾವಣಾ ಅಕ್ರಮ ನಡೆದಿರುವ ಪ್ರಕರಣಗಳೂ ದಾಖಲಾಗಿವೆ. ಹಣ, ಹೆಂಡ, ಸೀರೆ ಮುಂತಾದವುಗಳ ವಿತರಣೆ ಅವ್ಯಾಹತವಾಗಿ ಸಾಗುತ್ತಿದೆ. ಬಳ್ಳಾರಿಯಲ್ಲಿ ಎಲ್ಲಕ್ಕಿಂತ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿದ್ಯಾಶಂಕರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications