ಚುನಾವಣಾ ಕಣದಲ್ಲಿರುವ ಮಾಜಿ ನ್ಯಾಯವಾದಿಗಳು

ಓರಿಸ್ಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎನ್ ವೈ ಹನುಮಂತಪ್ಪ ಅವರು ಕಾಂಗ್ರೆಸ್ ಟಿಕೆಟು ಪಡೆದು ಬಳ್ಳಾರಿ (ಎಸ್ ಸಿ) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಆರೋಗ್ಯ ಮತ್ತು ಕುಟುಂಬ ಸಚಿವರಾಗಿರುವ ಶ್ರೀರಾಮುಲು ಅವರ ಸಂಬಂಧಿಯಾಗಿರುವ ಜೆ ಶಾಂತಾ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಹನುಮಂತಪ್ಪ ಅವರು ನ್ಯಾಯವಾದಿಯಾಗಿ ವೃತ್ತಿ ಪ್ರವೇಶಿಸುವ ಮೊದಲು ರಾಜ್ಯದಲ್ಲಿ ಕಾನೂನು ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ರಾಜಕೀಯಕ್ಕೆ ಸೇರಿದಮೇಲೂ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆಗಿಳಿದ್ದಿದ್ದಾರೆ. ರಾಜಕೀಯ ಸೇರುವ ಮುನ್ನ ಕರಿಕೋಟು ಧರಿಸಿ ನ್ಯಾಯ ಕೇಳುವವರ ಪರ ಹೋರಾಡಿದ್ದ ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್ ಬೀದರ್ ಲೋಕಸಭೆ ಕ್ಷೇತ್ರದಿಂದ ಗೆಲುವಿನ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನ ಮತ್ತೊಬ್ಬ ಹಿರಿಯ ಪುಢಾರಿ ಮಲ್ಲಿಕಾರ್ಜುನ ಖರ್ಗೆ ಗುಲಬರ್ಗದಿಂದ ಅಖಾಡಕ್ಕಿಳಿದಿದ್ದಾರೆ. ಖರ್ಗೆಯವರು ಕೂಡ ಬಿಳಿ ಟೋಪಿ ಧರಿಸುವ ಮುನ್ನ ಕರಿಕೋಟು ಧರಿಸಿದವರೇ.
ಕಾಂಗ್ರೆಸ್ ನಲ್ಲಿ ರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಮಾರ್ಗರೇಟ್ ಆಳ್ವಾ ಅವರು ಕೂಡ ಕಾನೂನು ಪದವಿ ಹೊಂದಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿರುವ ಅವರಿಗೆ ಜನ ನ್ಯಾಯ ದೊರಕಿಸಿಕೊಡುತ್ತಾರಾ ನೋಡಬೇಕು. ಇನ್ನು ಅದೇ ಪಕ್ಷದವರಾದ, ಕೊಪ್ಪಳದಿಂದ ಕಣಕ್ಕಿಳಿದಿರುವ ಬಸವರಾಜ ರಾಯರೆಡ್ಡಿಯವರು ಕೂಡ ಕಾನೂನನ್ನು ಅರಿದು ಕುಡಿದವರೇ.
ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿಯವರಿಗೆ ಟಕ್ಕರ್ ನೀಡಲು ರೆಡಿಯಾಗಿರುವ ತೇಜಸ್ವಿನಿ ಗೌಡ ಕಾನೂನು ಓದಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications