ಇಂದು ಸಂಜೆ ಒಂದು ಗಂಟೆ ವಿದ್ಯುತ್ ದೀಪ ಆರಿಸಿ
ಇಂದು ವಿಶ್ವದಾದ್ಯಂತ 'ಅರ್ಥ್ ಅವರ್ 2009' ಆಚರಿಸಲಾಗುತ್ತಿದ್ದು, ವಾತಾವರಣದ ಕಾವು ತಗ್ಗಿಸಲು ಸಹಕಾರ ನೀಡಬೇಕೆಂದು ವರ್ಲ್ಡ್ ವೈಲ್ಡ್ ಲೈಫ್ ಫಂಡ್ (WWF) ಕರೆ ನೀಡಿದೆ. ಇದನ್ನು ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಸಾವಿರದೈನೂರು ರಾಷ್ಟ್ರಗಳು ಈ ಅಭಿಯಾನದಲ್ಲಿ ಭಾಗವಹಿಸುತ್ತಿವೆ. ಭಾರತದಲ್ಲಿ 50ಕ್ಕೂ ಹೆಚ್ಚಿನ ಕಂಪನಿಗಳು, ಶಾಲಾ ಕಾಲೇಜು, ಬ್ಯಾಂಕು, ಸಾಫ್ಟ್ ವೇರ್ ಉದ್ಯಮ, ಮಾರಾಟ ಮಳಿಗೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ನಟ ಅಮೀರ್ ಖಾನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಇನ್ಫಿಯ ಮೋಹನದಾಸ್ ಪೈ ಮೊದಲಾದವರೂ ಬೆಂಬಕ್ಕೆ ನಿಂತಿದ್ದಾರೆ.
ಇದಕ್ಕೆ ನಾವು ಮಾಡಬೇಕಾದುದಿಷ್ಟೆ
1) ಸಾಯಂಕಾಲ 8.30ರಿಂದ 9.30ರವರೆಗೆ ವಿದ್ಯುತ್ ದೀಪಗಳನ್ನು ಆರಿಸಿ ಅಭಿಯಾನಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸುವುದು.
2) ಟಿವಿ ಸೀರಿಯಲ್ ವೀಕ್ಷಕರು ಅಟ್ಲೀಸ್ಟ್ ಇಂದಾದರೂ ಧಾರಾವಾಹಿಗಳಿಗೆ ಒಂದು ಗಂಟೆಗಳ ಕಾಲ ಅಲ್ಪ ವಿರಾಮ ನೀಡಿ.
3) ಇದರ ಬಗ್ಗೆ ಗೊತ್ತಿಲ್ಲದವರಿಗೆ ಮನವರಿಕೆ ಮಾಡಿಕೊಟ್ಟು ಅವರೂ ಭಾಗವಹಿಸುವಂತೆ ಮಾಡುವುದು.
4) ಒಂದು ಗಂಟೆ ಲೈಟ್ ತೆಗೆಯುವುದರಿಂದ ಏನೂ ನಷ್ಟವಿಲ್ಲ, ಬದಲಿಗೆ ವಿದ್ಯುತ್ ಉಳಿತಾಯವಾಗಲಿದೆ.
5) ಇದಕ್ಕಾಗಿ ಸಂಪೂರ್ಣ ಕತ್ತಲಲ್ಲಿ ಕೂಡಬೇಕೆಂದಿಲ್ಲ. ಎಮರ್ಜೆನ್ಸಿ ಲೈಟ್, ಮೊಂಬತ್ತಿಗಳನ್ನು ಅಂಟಿಸಬಹುದು.
ಬೆಂಗಳೂರಿನ ಎಸ್ಟೀಮ್ ಮಾಲ್, ಬ್ರಿಗೇಡ್ ರಸ್ತೆಯ ಎಲ್ಲ ಅಂಗಡಿಗಳು ಮತ್ತು ಅನೇಕ ಅಪಾರ್ಟ್ ಮೆಂಟುಗಳು ಕೂಡ ಇದಕ್ಕೆ ಕೈಜೋಡಿಸಿವೆ. ಒಂದೇ ದಿನದಲ್ಲಿ ಸಂಪೂರ್ಣ ಬದಲಾವಣೆ ತರಲು ಸಾಧ್ಯವಿಲ್ಲ. ಆದರೆ, ವಾತಾವರಣದ ಕಾವಿನ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವುದೇ ಮುಖ್ಯ ಉದ್ದೇಶ ಎಂದು ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)