ಮಾ.30ರೊಳಗೆ ಗುರುತಿನ ಚೀಟಿ ಪಡೆಯಿರಿ: ಡಿಸಿ
ಶಿವಮೊಗ್ಗ, ಮಾ. 24 : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆಯಲ್ಲಿ ಮತದಾನ ಮಾಡಲು ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಭಾರತ ಚುನಾವಣಾ ಆಯೋಗವು ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮತದಾರರಿಗೆ ಗುರುತಿನ ಚೀಟಿ ನೀಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತವು ಕಳೆದ ನವೆಂಬರ್ ನಿಂದಲೆ ವ್ಯಾಪಕವಾಗಿ ಕೈಗೊಂಡಿದೆ.
ಮತದಾರರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಹ ಸ್ವೀಕರಿಸಿ, ಪಟ್ಟಿಯಲ್ಲಿ ಹೆಸರು ಸೇರ್ಪಡಿಸುವ ಕೆಲಸವನ್ನು ಸಹ ಜಿಲ್ಲೆಯಾದ್ಯಂತ ಅತ್ಯಂತ ಚುರುಕಿನ ಕೈಗೊಂಡಿದೆಯಲ್ಲದೆ, ಭಾವಚಿತ್ರವುಳ್ಳ ಗುರುತಿನ ಚೀಟಿ ವಿತರಿಸುವ ಕೆಲಸವನ್ನು ಸಹ ವ್ಯವಸ್ಥಿತವಾಗಿ ಕೈಗೊಂಡಿದೆ. ಮತದಾರರು ತಪ್ಪದೆ ಈಗಾಗಲೆ ಪ್ರಕಟಿಸಿರುವ ದಿನಾಂಕ ಹಾಗೂ ಸ್ಥಳಗಳಿಗೆ ಖುದ್ದು ಭೇಟಿನೀಡಿ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ಒಟ್ಟು ಮತದಾರರ ಪೈಕಿ 3,66,273 ಮತದಾರರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿ ವಿತರಿಸಬೇಕಾಗಿದ್ದು, ಇದರಲ್ಲಿ ಈಗಾಗಲೆ 79,943 ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಉಳಿದ ಮತದಾರರಿಗೆ ಗುರುತಿನ ಚೀಟಿ ವಿತರಿಸಲು ಪ್ರತಿ ತಾಲ್ಲೂಕಿನಲ್ಲಿ 5 ರಿಂದ 6 ನೆಮ್ಮದಿ ಕೇಂದ್ರಗಳನ್ನು ಆರಂಭಿಸಿದ್ದು, ಪ್ರತಿದಿನ 32 ಸ್ಥಳಗಳಲ್ಲಿ ಗುರುತಿನ ಚೀಟಿ ವಿತರಿಸುವ ಕ್ರಮ ಕೈಗೊಂಡಿದೆ. ಇದಲ್ಲದೆ, ಆನ್ಲೈನ್ ಮೂಲಕ 8 ಕಡೆ ಹಾಗೂ ಇತರೆ ಕ್ಯಾಮರಾಗಳ ಮೂಲಕ ಈಗಾಗಲೆ ಪ್ರಚಾರ ಪಡಿಸಿರುವ ದಿನಾಂಕ ಹಾಗೂ ಸ್ಥಳಗಳಲ್ಲಿ 30 ಕ್ಯಾಮರಾಗಳ ಮೂಲಕ ಗುರುತಿನ ಚೀಟಿ ನೀಡುವ ಕೆಲಸವನ್ನು ತೀವ್ರವಾಗಿ ಕೈಗೊಂಡಿದೆ.
ಗುರುತಿನ ಚೀಟಿ ಪಡೆಯದಿರುವ ಮತದಾರರಿಗೆ ನೋಟೀಸ್ ಜಾರಿಮಾಡಿದೆ. ಹಾಗೂ ವ್ಯಾಪಕ ವಾಗಿ ಪ್ರಚಾರ ಮಾಡಿದೆ. ಮತದಾರರು ತಪ್ಪದೆ ಮಾರ್ಚ್ ೩೦ ರೊಳಗಾಗಿ ಗುರುತಿನ ಚೀಟಿ ನೀಡುವ ಕೇಂದ್ರಗಳಿಗೆ ಭೇಟಿನೀಡಿ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ಮನವಿ ಮಾಡಿದ್ದಾರೆ.
ಗುರುತಿನ ಚೀಟಿ ಇಲ್ಲದಿದ್ದರೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವೆ ಇಲ್ಲದಿರುವುದರಿಂದ ತಮ್ಮ ಹಕ್ಕು ಮತ್ತು ಕರ್ತವ್ಯದಿಂದ ವಂಚಿತರಾಗುವ ಅವಕಾಶಕ್ಕೆ ಎಡೆಮಾಡಿಕೊಡದೆ, ಭದ್ರಾವತಿ ಹಾಗೂ ಶಿವಮೊಗ್ಗದಲ್ಲಿರುವ ಮತದಾರರ ಸೇವಾ ಕೇಂದ್ರಗಳಿಗೆ ತೆರಳಿ ಗುರುತಿನ ಚೀಟಿ ಪಡೆಯುವಂತೆ ಮನವಿ ಮಾಡಿರುವ ಜಿಲ್ಲಾಧಿಕಾರಿಗಳು ಸಾಕಷ್ಟು ಪ್ರಚಾರ ನೀಡಿದಾಗ್ಯೂ ಬಹಳಷ್ಟು ಕಡೆ ಮತದಾರರು ಗುರುತಿನ ಚೀಟಿ ಪಡೆಯಲು ಕೇಂದ್ರಗಳಿಗೆ ಬರುತ್ತಿಲ್ಲವಾದ್ದರಿಂದ ಎಲ್ಲ ರಾಜಕೀಯ ಪಕ್ಷದ ಮುಖಂಡರು, ಸಂಘ ಸಂಸ್ಥೆಗಳು ಮತದಾರರಿಗೆ ಮಾಹಿತಿ ನೀಡಿ ಗುರುತಿನ ಚೀಟಿ ನೀಡುವ ಕಾರ್ಯಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಂಗಾರಪ್ಪ ವಿರುದ್ಧ ಹರಿಹಾಯ್ದ ರಾಘವೇಂದ್ರ












Click it and Unblock the Notifications