ಯುಗಾದಿಗೆ ದಿನದಂದು ಸೋಮಣ್ಣ ಬಿಜೆಪಿ ಸೇರ್ಪಡೆ
ಬೆಂಗಳೂರು, ಮಾ. 23 : ಗೋವಿಂದನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ ಸೋಮಣ್ಣ ಭಾರತೀಯ ಜನತಾ ಪಕ್ಷ ಸೇರ್ಪಡೆ ಬಹುತೇಕ ಖಚಿತವಾಗಿದೆ. ಅನೇಕ ದಿನಗಳಿಂದ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಗಾಳಿ ಸುದ್ದಿ ತೆರೆ ಎಳೆಯುವ ಸಾಧ್ಯತೆ ಇದೆ. ಈ ಮೂಲಕ ಯುಗಾದಿ ಹಬ್ಬದ ನಂತರ ಸೋಮಣ್ಣ ಕಾಂಗ್ರೆಸ್ ಗೆ ಸಲಾಂ ಹೊಡೆದು ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಪೂರಕವಾಗಿ ಸೋಮಣ್ಣ ಅವರ ಮಗ ಅರುಣ್ ಸೋಮಣ್ಣ, ಕಟ್ಟಾ ಬೆಂಬಲಿಗರೂ ಆಗಿರುವ ಮಾಜಿ ಉಪಮೇಯರ್ ಎಂ ಲಕ್ಷ್ಮನಾರಾಯಾಣ, ಬಿ ಎಸ್ ಪುಟ್ಟರಾಜು ಸೇರಿದಂತೆ ಮಹಾನಗರ ಪಾಲಿಕೆಯ ಅನೇಕ ಮಾಜಿ ಸದಸ್ಯರು ಬಿಜೆಪಿ ಸೇರಲಿದ್ದಾರೆ. ಸೋಮಣ್ಣ ಅವರನ್ನು ಕಮಲದ ಬಲೆಗೆ ಬೀಳಿಸಿಕೊಳ್ಳಲು ಸಾರಿಗೆ ಸಚಿವ ಆರ್ ಅಶೋಕ್ ಸಾರಥ್ಯ ವಹಿಸಿದ್ದು, ಸೋಮಣ್ಣ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಸೇರುವ ಸೋಮಣ್ಣ ಅವರಿಗೆ ಬೆಂಗಳೂರು ಮೇಯರ್ ಸ್ಥಾನ ಇಲ್ಲವೇ ಸಚಿವ ಸ್ಥಾನದ ಆಮಿಷವನ್ನು ಬಿಜೆಪಿ ಒಡ್ಡಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಸೋಮಣ್ಣ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಸೋಮಣ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಬಿಜೆಪಿಯಲ್ಲಿ ಭರದ ಸಿದ್ಧತೆ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)