ತೃತೀಯರಂಗ ಸರ್ಕಾರಕ್ಕೆ ಕೈ ಬೆಂಬಲ ಕೋರಿಕೆ, ಕಾರಟ್
ನವದೆಹಲಿ, ಮಾ. 19 : ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯಪಿಎ ಸರ್ಕಾರದೊಂದಿಗೆ ಮುನಿಸಿಕೊಂಡು ಬೆಂಬಲ ವಾಪಸ್ಸು ತೆಗೆದುಕೊಂಡಿದ್ದ ಎಡಪಕ್ಷಗಳ ಇದೀಗ ಮತ್ತೆ ಕಾಂಗ್ರೆಸ್ ಹಾಗೂ ಅದರ ಅಂಗ ಪಕ್ಷಗಳ ಕಡೆಗೆ ಮುಖಮಾಡತೊಡಗಿವೆ. ತೃತೀಯ ರಂಗ ಸರ್ಕಾರಕ್ಕೆ ಅಗತ್ಯ ಬಿದ್ದರೆ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಕೋರುತ್ತೇವೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.
ಎನ್ ಡಿಎ ಹಾಗೂ ಯಪಿಎಯೇತರ ಸರ್ಕಾರಗಳ ರಚನೆಗೆ ಬೇರೆ ಜಾತ್ಯಾತೀತ ಪಕ್ಷಗಳ ಬೆಂಬಲ ಪಡೆದುಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ತೃತೀಯ ರಂಗದ ಪ್ರಬಲ ಪಕ್ಷ ಎಡಪಕ್ಷಗಳು, ಪ್ರಾದೇಶಿಕ ಪಕ್ಷಗಳು ಸೇರಿಕೊಂಡು ಈ ಕೂಟವನ್ನು ರಚಿಸಲಾಗಿದೆ. ಇದು ಎನ್ ಡಿಎ ಮತ್ತು ಯುಪಿಎ ರಂಗಗಳಿಗೆ ಪರ್ಯಾಯ ಎಂದು ಅವರು, ಪರಮಾಣು ಒಪ್ಪಂದ ವಿಷಯ ಇದೀಗ ಮುಗಿದ ಅಧ್ಯಾಯ ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಯುಪಿಎ ಸರ್ಕಾರ ಅಮೆರಿಕದೊಂದಿಗೆ ಮಾಡಿಕೊಂಡ ನಾಗರಿಕ ಪರಮಾಣು ಒಪ್ಪಂದವನ್ನು ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನಾಗರಿಕ ಪರಣಾಮ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ಯುಪಿಎ ಸರ್ಕಾರವನ್ನು ಮನಬಂದಂತೆ ಟೀಕಿಸಿದ್ದವು. ಭಾರತವನ್ನು ಯುಪಿಎ ಸರ್ಕಾರ ಅಮೆರಿಕಕ್ಕೆ ಮಾರಾಟ ಮಾಡಿದೆ ಎಂದು ಇದೇ ಪ್ರಕಾಶ್ ಕಾರಟ್ ಆರೋಪಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications