ಭಗವಾಧ್ವಜ ತೆಗೆಯಲು ನನ್ನ ವಿರೋಧವಿದೆ, ಅಂಗಡಿ
ಕರವೇ ಕಾರ್ಯಕರ್ತರು ಸೋಮವಾರ ಪಾಲಿಕೆ ಮೇಲಿರುವ ಭಗವಾಧ್ವಜವನ್ನು ತೆಗೆಯಲು ಯತ್ನಿಸಿದ್ದರಿಂದ ಎಂಇಎಸ್ ಕಾರ್ಯಕರ್ತರು ಇದನ್ನು ತೀವ್ರವಾಗಿ ವಿರೋಧಿಸಿದರು. ಆಗ ಸಂಸದ ಸುರೇಶ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಎಂಇಎಸ್ ಕಾರ್ಯಕರ್ತರಿಗೆ ಬೆಂಬಲ ನೀಡಿದ್ದರು. ಇದು ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿದ ಕರವೇ ಕಾರ್ಯಕರ್ತರು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಸಂಸದ ಅಂಗಡಿ ಈ ರೀತಿ ಉತ್ತರಿಸಿದರು.
ನನ್ನ ಕ್ರಮವನ್ನು ಇಂದು ಕೂಡಾ ಸಮರ್ಥಿಸಿಕೊಳ್ಳುವೆ ಎಂದ ಅಂಗಡಿ, ಭಗವಾಧ್ವಜ ಸಮಸ್ತ ಹಿಂದೂಗಳ ಸಂಕೇತ. ಅದು ಪಾಲಿಕೆ ಮೇಲೆ ಇದ್ದರೆ ತಪ್ಪೇನು ಎಂದು ಪ್ರಶ್ನಿಸಿದರು. ಕೇಸರಿ ಬಣ್ಣ ಭಗವಾಧ್ವಜವನ್ನು ದೇಶದ ಹೃದಯ ಕೇಂದ್ರ ಸಂಸತ್ತಿನ ಮೇಲೆ ಹಾರಿಸಬೇಕು ಎನ್ನುವುದು ನನ್ನ ರಾಜಕೀಯ ಜೀವನದ ಏಕೈಕ ಗುರಿ ಎಂದು ಹೇಳಿದರು.
ಕನ್ನಡಪರ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿಯಲ್ಲಿ ಕನ್ನಡಿಗರು ಮಹಾಪೌರರಾಗಲು ಶ್ರಮಿಸಿದವರು ಯಾರು, ಗಂಡು ಮೆಟ್ಟಿದ ಬೆಳಗಾವಿ ನೆಲೆದ ಗಂಡು ಮಗ ನಾನು. ಯಾವ ಕಾರಣಕ್ಕೂ ಕರ್ನಾಟಕಕ್ಕೆ, ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗಡಿ ವಿಷಯಕ್ಕೂ, ಪಾಲಿಕೆ ಮೇಲಿನ ಧ್ವಜಕ್ಕೂ ತಾಳೆ ಹಾಕುವುದು ಸರಿಯಲ್ಲ. ಗಡಿ ವಿಷಯಕ್ಕೆ ಬಂದರೆ ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೆ. ಬೆಳಗಾವಿಯ ಒಂದು ಇಂಚೂ ಜಾಗ ಕೂಡ ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.
ಭಗವಾಧ್ವಜಕ್ಕೆ ಸಂಬಂಧಿಸಿದಂತೆ ಇಂದಿನ ಬೆಳವಣಿಗೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕುತಂತ್ರವಿದೆ. ಬೆಳಗಾವಿ ನಗರದ ವಾತಾವರಣ ಕೆಡಿಸಿ, ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಮತ ಗಿಟ್ಟಿಸುವ ಒಂದೇ ಉದ್ದೇಶದಿಂದ ಈ ತಂತ್ರ ರೂಪಿಸಿದೆ ಎಂದು ಅವರು ಆರೋಪಿಸಿದರು. ಆದರೆ, ಬೆಳಗಾವಿ ಪಾಲಿಕೆಯ ಮೇಲಿರುವ ಭಗವಾಧ್ವಜವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ತಮ್ಮ ಲಾಂಛನ ಎಂದು ಬಿಂಬಿಸಿಕೊಂಡು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)
ಸಂಸದ ಅಂಗಡಿ ಜನ್ಮ ಜಾಲಾಡುತ್ತಿರುವ ಕರವೇ