ದಯವಿಟ್ಟು ಡಾ ಯಡಿಯೂರಪ್ಪ ಅನ್ನಬೇಡಿ ಎಂದ ಸಿಎಂ
ಬೆಂಗಳೂರು, ಫೆ. 24 : ಅಮೆರಿಕದ ಮಿಚಿಗನ್ ನ ಸಗಿನಾವ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿರುವ ಯಡಿಯೂರಪ್ಪ ಅವರು ಡಾ. ಬಿಎಸ್ ಯಡಿಯೂರಪ್ಪ ಆಗಿರುವುದು ಹಳೆಯ ಸುದ್ದಿ. ಆದರೆ, ಇದೀಗ ಯಡಿಯೂರಪ್ಪ ತಮ್ಮನ್ನು ಡಾ. ಯಡಿಯೂರಪ್ಪ ಎಂದು ಕರೆಯಬೇಡಿ, ಸಾಮಾನ್ಯ ರೈತರ ಮಗನಾಗಿರುವ ನಾನು, ರೈತರ ಮನನಾಗಿಯೇ ಇರಲು ಇಚ್ಛೆಪಡುತ್ತೇನೆ. ರೈತನ ಮಗ ಯಡಿಯೂರಪ್ಪ ಎಂದು ಕರೆದರೆ ಸಂತೋಷವಾಗಲಿದೆ ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ನಿಮಗೆ ನೆನಪಿರಬಹುದು, ಸಗಿನಾವ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ಘೋಷಣೆ ಮಾಡುತ್ತಿದ್ದಂತೆಯೇ ಬಿಜೆಪಿಯಲ್ಲಿ ಸಂಭ್ರಮ ಮನೆಮಾಡಿತ್ತು. ಕಾರ್ಯಕರ್ತರು ಈ ಸಂಭ್ರಮವನ್ನು ಹಬ್ಬದಂತೆ ಆಚರಿಸಿದ ಉದಾಹರಣೆಯೂ ಇದೆ. ಇನ್ನು ಪದವಿ ಪಡೆದುಕೊಳ್ಳಲು ಯಡಿಯೂರಪ್ಪ ಸೇರಿ ಸಂಪುಟ ಅರ್ಧ ಡಜನ್ ಸಚಿವರು ಅಮೆರಿಕಕ್ಕೆ ತೆರಳಿದ್ದು ಗೊತ್ತಿರುವ ಸಂಗತಿ. ಯಾವ ಸಾಧನೆಗೆ ಮುಖ್ಯಮಂತ್ರಿಯವರು ಡಾಕ್ಟರೇಟ್ ಪಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕರು ಟೀಕೆ ಟಿಪ್ಪಣಿ ಮಾಡಿದರೂ, ಯಾವುದನ್ನೂ ಲೆಕ್ಕಿಸದ ಯಡಿಯೂರಪ್ಪ ಪದವಿ ಪಡೆದುಕೊಂಡು ಡಾ. ಯಡಿಯೂರಪ್ಪ ಆಗಿದ್ದರು.
ಆದರೆ, ಶಿವರಾತ್ರಿ ದಿನದಂದು ಯಾವುದಾದರೊಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರತಿಜ್ಞೆ ಮಾಡಿರುವ ಮುಖ್ಯಮಂತ್ರಿ ಡಾ ಯಡಿಯೂರಪ್ಪ ಅವರು, ಬರೀ ಯಡಿಯೂರಪ್ಪ ಎಂದು ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ. ಗೋಕರ್ಣದ ರಾಮಚಂದ್ರಾಪುರದ ಶ್ರೀ ರಾಘವೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಭೆ, ಸಮಾರಂಭಗಳಲ್ಲಿ ಹಾರ-ತುರಾಯಿ ಹಾಕಿಸಿಕೊಳ್ಳದಿರಲು ಕೂಡ ನಿರ್ಧರಿಸಲಾಗಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಕ್ಟರೇಟ್ ಪಡೆಯಲು ನನಗಿಂತ ಅರ್ಹರು ಬೇಕಾದಷ್ಟು ಜನ ಇದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಮಗನಾಗಿರುವ ನಾನು, ರೈತನ ಮಗ ಯಡಿಯೂರಪ್ಪ ಎಂದು ಕರೆಸಿಕೊಳ್ಳಲು ಇಚ್ಛೆಪಡುತ್ತೇನೆ. ಈ ಬಗ್ಗೆ ಶೀಘ್ರದಲ್ಲಿ ಸರ್ಕಾರಿ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ : ಆಲದ ಹೂವು ಹೂವಲ್ಲ, ಗೌರವ ಡಾಕ್ಟರೇಟ್ ಪದವಿಯಲ್ಲ!












Click it and Unblock the Notifications