ಗಂಗಾಜಲ ವಿತರಣೆ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
ಬೆಂಗಳೂರು, ಫೆ. 22 : ಶಿವರಾತ್ರಿ ಹಬ್ಬದ ನಿಮಿತ್ತ ರಾಜ್ಯದ ಜನತೆಗೆ ಪವಿತ್ರ ಗಂಗಾಜಲವನ್ನು ವಿತರಿಸಲು ಉದ್ದೇಶಿಸಲಾಗಿರುವ ಹಿನ್ನೆಲೆಯಲ್ಲಿ ಹೃಷಿಕೇಶದಿಂದ 50 ಸಾವಿರ ಲೀಟರ್ ಗಂಗಾಜಲ ಒಳಗೊಂಡಿರುವ ಎರಡು ಟ್ಯಾಂಕರ್ ಗಳು ಇಂದು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಬೆಂಗಳೂರು ತಲುಪಲಿವೆ.
ಸ್ವಂತ ಖರ್ಚಿನಲ್ಲಿ ರಾಜ್ಯದ ಮುಜರಾಯಿ ಖಾತೆ ಸಚಿವ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿ ಹಬ್ಬದ ನಿಮಿತ್ತ ರಾಜ್ಯದ ಜನತೆಗೆ ಪವಿತ್ರ ಗಂಗಾಜಲ ವಿತರಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿರುವ ಶಿವ ದೇವಾಲಯದಲ್ಲಿ ಫೆ 23 ರಂದು ಗಂಗಾಜಲ ದೊರೆಯಲಿದೆ. ಎಲ್ಲ ದೇವಾಲಯಗಳಿಗೆ ಗಂಗಾಜಲ ವಿತರಿಸುವ ಕೆಲಸವನ್ನು ಮುಜರಾಯಿ ಇಲಾಖೆಗೆ ವಹಿಸಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಬಳಿ ಇರುವ ರಾಮೇಶ್ವರ ಚೌಲ್ಟ್ರಿಯಲ್ಲಿ ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಗಂಗಾಜಲ ವಿತರಣೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇಂದು ಸಂಜೆ ರಾಜ್ಯ ಎಲ್ಲ ತಾಲ್ಲೂಕಗಳಿಗೆ ಗಂಗಾಜಲ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ತಾಲ್ಲೂಕಿಗೂ 100 ರಿಂದ 150 ಲೀಟರ್ ಗಂಗಾಜಲವನ್ನು ನೀಡಲಾಗುವುದು. ಸೋಮವಾರ ಬೆಳಗ್ಗೆ ಶಿವನಿಗೆ ಪೂಜೆ ಕೈಂಕರ್ಯಗಳು ಮುಗಿದ ನಂತರ ಗಂಗಾಜಲವನ್ನು ವಿತರಿಸಲಾಗುವುದು. ರಾಜ್ಯದಲ್ಲಿ ಒಟ್ಟು 1500 ಶಿವ ದೇವಾಲಯಗಳಿಗೆ ಗಂಗಾಜಲವನ್ನು ವಿತರಸಲಾಗುವುದು ಎಂದು ಮುಜರಾಯಿ ಖಾತೆ ಸಚಿವ ಕೃಷ್ಣಯ್ಯ ಶೆಟ್ಟಿ ತಿಳಿಸಿದರು.
ಗಂಗಾಜಲ ವಿತರಣೆ ನಮ್ಮ ಖರ್ಚಿನಲ್ಲಿ ಮಾಡಲಾಗುತ್ತಿದ್ದು, ಸ್ನೇಹಿತರೊಬ್ಬರು ಇದರ ಅಷ್ಟೂ ಖರ್ಚನ್ನು ವಹಿಸಿಕೊಂಡಿದ್ದಾರೆ. ಗಂಗಾಜಲದ ಜೊತೆಗೆ ಕ್ಯಾಲೆಂಡರ್ ಸಹ ವಿತರಿಸಲಾಗುವುದು. ಗಂಗಾಜಲ ವಿತರಣೆ ಸಕಲ ವ್ಯವಸ್ಥೆ ಮಾಡಿಕೊಂಡಿದ್ದು, ರಾಜ್ಯದ ಬಡ ಜನತೆಗೂ ಇದರ ಸೌಭಾಗ್ಯ ದೊರೆಯಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮಕ್ಕೆ ಮುಂದಾಗಿರುವುದಾಗಿ ಸಚಿವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಇಳಿದು ಬಾ ತಾಯಿ..ಇಳಿದು ಬಾ ತಾಯಿ
ಶಿವರಾತ್ರಿಗೆ ಗಂಗಾ ನೀರು ಕುಡಿಸಲು ಸರ್ಕಾರ ಸಿದ್ಧತೆ












Click it and Unblock the Notifications