ಶ್ರುತಿ ಪ್ರಕರಣದಲ್ಲಿ ಸೇನೆ ಕೈವಾಡವಿಲ್ಲ : ಮುತಾಲಿಕ್

ಸೇನೆಗೆ ಮಸಿಬಳಿಯಲೆಂದೇ ಅದರ ಹೆಸರನ್ನು ಅನಗತ್ಯವಾಗಿ ಎಳೆದುತರಲಾಗುತ್ತಿದೆ. ಶ್ರೀರಾಮಸೇನೆ ಕೂಡ ಈ ಘಟನೆಯನ್ನು ಖಂಡಿಸುತ್ತದೆ ಎಂದು ಹೇಳಿದ್ದಾರೆ. ಇದೇ ರೀತಿ ಸೇನೆಯ ಹೆಸರನ್ನು ಎಲ್ಲ ಪ್ರಕರಣಗಳಿಗೆ ಸೇರಿಸುತ್ತಿದ್ದರೆ ಕೋರ್ಟಿನ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಶುಕ್ರವಾರ ಶ್ರುತಿ ಮತ್ತು ಶಾಹಿಬ್ ಪ್ರಯಾಣಿಸುತ್ತಿದ್ದ ಬಸ್ಸಿನಿಂದ ಅವರಿಬ್ಬರನ್ನು ಅಪಹರಿಸಿ ಥಳಿಸಲಾಗಿತ್ತು. ಈ ಸಂಬಂಧ ಪೊಲೀಸರು ಇಬ್ಬರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ವಿಧ್ಯಾರ್ಥಿನಿಯಾಗಿರುವ ಶ್ರುತಿ, ಶನಿವಾರದ ಪರೀಕ್ಷೆಗೆ ಹಾಜರಾಗಲು ಶುಕ್ರವಾರ ಸಂಜೆ 4.30ರ ಸುಮಾರಿಗೆ ಕಾಸರಗೋಡಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದರು. ಕಾಸರಗೋಡು ಸಮೀಪದ ಕರ೦ದಕ್ಕಾಡ ಎನ್ನುವ ಬಳಿ ಅದೇ ಬಸ್ ಏರಿಕೊಂಡ ಶಾಹಿಬ್ ಮತ್ತು ಶ್ರುತಿ ಜೊತೆಯಾಗಿ ಮಂಗಳೂರಿಗೆ ಪಯಣ ಬೆಳೆಸಿದರು. ಈ ನಡುವೆ ಬಸ್ ಕಂಡಕ್ಟರ್ ಭಜರಂಗದಳ ಮತ್ತು ಶ್ರೀರಾಮ ಸೇನೆಯವರಿಗೆ ಮೊಬೈಲ್ ಮೂಲಕ ವಿಚಾರ ತಿಳಿಸಿದ್ದಾನೆ ಎಂದು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ದೂರಿದ್ದಾರೆ. ಮಂಗಳೂರು ಪ೦ಪವೆಲ ವ್ರತ್ತದ ಬಳಿ ಇಳಿದು ಶ್ರತಿ ತನ್ನ ಹಾಸ್ಟೆಲ್ ಕಡೆಗೆ ಶಾಹಿಬ್ ಜೊತೆ ಹೊರಟಿದ್ದಾಗ ಆಟೋದಲ್ಲಿ ಬಂದ ಗುಂಪೊಂದು ಇಬ್ಬರನ್ನೂ ಚೆನ್ನಾಗಿ ಥಳಿಸಿ ಸುಮಾರು ಒಂದು ಗಂಟೆಯ ನಂತರ ನಗರದ ಪಡೀಲ ಬಳಿ ಇಳಿಸಿ ಹೋಗಿದೆ ಎಂದು ವರದಿಯಾಗಿದೆ.
ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವುದಾಗಿ ಹೇಳಿರುವ ರಾಜ್ಯ ಗೃಹ ಸಚಿವ ವಿ.ಎಸ್. ಆಚಾರ್ಯ, "ಕೇರಳದ ಶಾಸಕರ ಪುತ್ರಿ ಸುರಕ್ಷಿತವಾಗಿದ್ದಾಳೆ, ಆಕೆಯ ಜೊತೆಗಿದ್ದ ಯುವಕನ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ವಿಚಾರಣೆ ನಡೆಸುವಂತೆ ಪೋಲಿಸ್ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications