ಪಬ್ ವಿರುದ್ಧ ತೇಜಸ್ವಿನಿ ರಮೇಶ್ ಗುಡುಗು

ವ್ಯಾಲೆಂಟೈನ್ ದಿನಾಚರಣೆ ಇನ್ನೂ ಒಂದು ವಾರ ಇರುವಾಗಲೇ ಈ ಕುರಿತು ಭಿನ್ನ ಹೇಳಿಕೆಗಳು ಸಮಾಜದ ವಿವಿಧ ವಲಯಗಳಿಂದ ಬರುತ್ತಿವೆ. ಒಂದು ಕಡೆ ರಾಮಸೇನೆಯಿಂದ ಬೆದರಿಕೆ; ಸೇನೆಯ ಬೆದರಿಕೆಗೆ ಜಗ್ಗುವುದಿಲ್ಲ ಎಂಬ ಹೇಳಿಕೆಗಳು ಇನ್ನೊಂದೆಡೆಗಳಿಂದ ನುಗ್ಗಿ ಬರುತ್ತಿದ್ದು ವಾದವಿವಾದಗಳು ದಿನೇ ದಿನೇ ಜಟಿಲವಾಗುತ್ತಿದೆ. ಕೆಲವು ಸ್ತ್ರೀವಾದಿ ಗುಂಪುಗಳಿಂದ ಮತ್ತು ಕೆಲವು ಇಂಗ್ಲಿಷ್ ಪತ್ರಿಕೆಗಳಿಂದ ಪಬ್ ಸಂಸ್ಕೃತಿಗೆ ಬೆಂಬಲ ವ್ಯಕ್ತವಾಗುತ್ತಿದ್ದರೆ ಸಾಂಪ್ರದಾಯಿಕ ಭಾರತೀಯ ಜೀವನ ಶೈಲಿಯಲ್ಲಿ ಇನ್ನೂ ನಂಬಿಕೆ ಇಟ್ಟಿರುವ ವಲಯಗಳಿಂದ ಪ್ರತಿರೋಧ ಬರುತ್ತಿವೆ.
ಪ್ರೇಮಿಗಳ ದಿನ ಆಚರಿಸಲು ಬಿಡುವುದಿಲ್ಲವೆಂದು ಶ್ರೀರಾಮಸೇನೆ ಟೊಂಕಕಟ್ಟಿ ನಿಂತಿದ್ದರೆ, ಅಗ್ನಿ ಶ್ರೀಧರ್ ಅದ್ಹೇಗೆ ತಡೆಯುತ್ತೀರೆಂದು ಸೆಡ್ಡು ಹೊಡೆದಿದ್ದಾರೆ. ಹೇಳಿಕೆ ಕೊಡದಿದ್ದರೆ ತಪ್ಪಾದೀತೆಂದು ನಮ್ಮ ಗೃಹ ಸಚಿವ ಆಚಾರ್ಯರೂ ಪ್ರೇಮಿಗಳ ಬೆಂಬಲಿಗೆ ನಿಂತಿರುವುದಾಗಿ ಹೇಳಿದ್ದಾರೆ. ಪ್ರೇಮಿಗಳನ್ನು ಅವರವರ ಪಾಡಿಗೆ ಇರಲು ಬಿಡಿ ಎಂದು ಮಾಜಿ ಗಿರಿಕನ್ಯೆ ಜಯಮಾಲಾ ರಾಖಿ ವಿರೋಧಿ ಸಂಸ್ಕೃತಿಗೆ ಠಸ್ಸೆ ಒತ್ತಿದ್ದಾರೆ.
ಈ ಮಧ್ಯೆ ತೇಜಸ್ವಿನಿ ರಮೇಶ್ ವಿವಾದದ ಅಖಾಡಕ್ಕೆ ಧುಮುಕಿದ್ದಾರೆ. ಎತ್ತು ಏರಿಗೆ ಕೋಣ ನೀರಿಗೆ ಎಂಬ ಮಾತಿಗೆ ವಿರುದ್ಧ ಹೇಳಿಕೆ ನೀಡುವಲ್ಲಿ ತೇಜಸ್ವಿನಿ ರಮೇಶ್ ಸಿದ್ಧಹಸ್ತರು. ಅವರ ಪಕ್ಷವಾದ ಕಾಂಗ್ರೆಸ್ಸಿನ ಅಧಿಕೃತ ವಕ್ತಾರರ ನಿಲುವಿನ ವಿರುದ್ಧವೇ ಅವರು ಮಾತನಾಡಿದ್ದು ಅದು ಇನ್ನೊಂದು ವಿವಾದದ ಕೇಂದ್ರವಾಗುವುದು ನಿಸ್ಸಂಶಯ. ಬೆಂಗಳೂರಿನಲ್ಲಿ ಏರುತ್ತಿರುವ ಪಬ್ ಪರ ಲಾಬಿಗಳ ವಿರುದ್ಧ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧೀ ಅವರಿಗೆ ತೇಜಸ್ವಿನಿ ದೂರು ಕೊಡುವುದಾಗಿಯೂ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications