ಉಡುಪಿ ಲೋಕಸಭೆ ಕ್ಷೇತ್ರದಿಂದ ಪ್ರಿಯಾಂಕ ವದ್ರಾ?
ಬೆಂಗಳೂರು, ಫೆ.4: ಮುಂಬರುವ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷ ಇಂದಿರಾಗಾಂಧಿ ಅವರ ಮೊಮ್ಮಗಳು ಪ್ರಿಯಾಂಕ ವದ್ರಾ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಮಾಜಿಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಪುನರ್ ವಿಂಗಡನೆಯ ನಂತರ ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಗೌಡ ಅವರ ವಿರುದ್ಧ ಪ್ರಿಯಾಂಕರನ್ನು ಕಣಕ್ಕಿಳಿಸಲು ಶತಾಯ ಗತಾಯ ಪ್ರಯತ್ನಿಸಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಕುಗ್ಗಿದ್ದು, ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪಕ್ಷ ಮತ್ತೆ ನೆಹರು ಕುಟುಂಬದ ಕೊಂಡಿಯನ್ನು ಬಳಸಿಕೊಳ್ಳುವ ತಂತ್ರ ನಡೆಸಿದ್ದು, ಪ್ರಿಯಾಂಕ ಅವರನ್ನು ಉಡುಪಿ ಲೋಕಸಭಾ ಕ್ಶೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ನಿರ್ಣಯ ಕೈಗೊಂಡಿದ್ದಾರೆ. ಇಂದಿರಾಗಾಂಧಿ ಅವರ ಮುಖಭಾವವನ್ನೇ ಹೋಲುವ ಪ್ರಿಯಾಂಕ ಚುನಾವಣೆಗೆ ನಿಂತರೆ ಮತ್ತೆ ಪಕ್ಷ ತನ್ನ ಹಳೆಯ ವೈಭವವನ್ನು ಮರುಕಳಿಸಬಹುದು ಆನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.
ಉಡುಪಿ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರುಗಳು ಇಲ್ಲಿಂದ ಸ್ಪರ್ಧಿಸಲು ಉತ್ಸುಕರಾಗಿರುವುದು ಆಶ್ಚರ್ಯವಾಗಿದೆ. ಪ್ರಿಯಾಂಕ ಉಡುಪಿಯಿಂದ ಸ್ಪರ್ಧಿಸುವ ವಿಷಯ ಚುನಾವಣಾ ವೇಳೆಗೆ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಲೋಕಸಭೆ ಚುನಾವಣೆ, ವಿವಿಧ ಪಕ್ಷಗಳ ಸಭೆ
ಕುಮಾರಸ್ವಾಮಿ ಕಣ್ಣು ಲೋಕಸಭೆ ಮೇಲೆ












Click it and Unblock the Notifications