ಸಿದ್ದು, ಸೋನಿಯಾ ಭೇಟಿ; ಖರ್ಗೆ ಅಸಮಾಧಾನ!
ನವದೆಹಲಿ, ಜ.31: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾತ್ರಿ ಭೇಟಿ ಮಾಡಿದರು. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮತ್ತು ಸಂಸದ ಆರ್.ಎಲ್.ಜಾಲಪ್ಪ ಅವರ್ರೂ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಶುಕ್ರವಾರ ನಡೆದ ಮಾತುಕತೆಯಲ್ಲಿ ತೀರ್ಮಾನವಾಗಿಲ್ಲ.ಹಾಗಾಗಿ ಸಿದ್ಧರಾಮಯ್ಯ ಅವರಿಗೆ ಕಾಂಗ್ರೆಸ್ ನಲ್ಲಿ ಯಾವ ಸ್ಥಾನಮಾನ ನೀಡಲಾಗುತ್ತದೆ ಎಂಬ ವಿಷಯ ಗುಟ್ಟಾಗಿದೆ. ಸಂಧಾನದಿಂದ ಸಿದ್ದರಾಮಯ್ಯ ಸಹ ತೃಪ್ತರಾಗಿಲ್ಲ ಎಂದು ಮೂಲಗಲು ತಿಳಿಸಿವೆ.
ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟ್ಟಿದ್ದ ಸಿದ್ದರಾಮಯ್ಯ ಶುಕ್ರವಾರ ಸೋನಿಯಾಗಾಂಧಿ, ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಪೃಥ್ವಿರಾಜ್ ಚೌಹಾಣ್, ಸೋನಿಯಾರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಜತೆ ಮಾತುಕತೆ ನಡೆಸಿದರು. ಈ ಮಧ್ಯೆ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಸಹ ಕಾಂಗ್ರೆಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು ಪ್ರತಿಪಕ್ಷ ಸ್ಥಾನವನ್ನು ಬಿಟ್ಟುಕೊಡಬೇಕೆಂಬ ಹಿರಿಯ ನಾಯಕರ ಸಲಹೆಗೆ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
(ಏಜೆನ್ಸೀಸ್)