ಬೀದರ ಉತ್ಸವಕ್ಕೆ ಸಕಲ ಸಿದ್ಧತೆ
ಬೀದರ. ಜ. 23 : ಬೀದರ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಐತಿಹಾಸಿಕ ಬೀದರ ಕೊಟೆ ಸಂಪೂರ್ಣ ಸಜ್ಜಾಗುತ್ತಿದ್ದು, ಮೂರು ದಿನಗಳ ಸಾಂಸ್ಕೃತಿಕ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಬೀದರ ಉತ್ಸವಕ್ಕೆ ಪೂರ್ವಭಾವಿಯಾಗಿ ಬೀದರ ಕೋಟೆಯನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಹಲವಾರು ತಿಂಗಳುಗಳಿಂದ ಕೈಗೊಳ್ಳಲಾಗುತ್ತಿದ್ದು, ಕೋಟೆಯ ಒಳಗೆ ಜನರ ಸುಗಮ ಸಂಚಾರಕ್ಕೆ ಪೂರಕವಾಗಿ ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.
ಕೋಟೆಯ ಒಳಗೆ ಇರುವ ಬೊಮ್ಮಗೊಂಡೇಶ್ವರ ಕೆರೆಗೆ ಹೊಸ ಸಂಪರ್ಕ ರಸ್ತೆಯನ್ನು ಕಲ್ಪಿಸಲಾಗಿದೆ. ಕೆರೆಯ ಮೇಲ್ದಂಡೆಯಲ್ಲಿ ಕೆರೆಯ ವೀಕ್ಷಣೆಗಾಗಿ ಸ್ಥಳವನ್ನು ಸಜ್ಜುಗೊಳಿಸಲಾಗಿದ್ದು, ಕೆರೆಯ ಬಳಿಗೆ ತೆರಳಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಬೊಮ್ಮಗೊಂಡೇಶ್ವರ ಕೆರೆಗೆ ಹೆಚ್ಚಿನ ಜನರನ್ನು ಆಕರ್ಷಿಸುವ ಉದ್ದೇಶದಿಂದ ಉತ್ಸವದ ಸಂದರ್ಭದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಬೊಮ್ಮಗೊಂಡೇಶ್ವರ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ತಿಳಿಸಿದ್ದಾರೆ.
ಕಳೆದ ಎರಡು ಬೀದರ ಉತ್ಸವಗಳ ಅನುಭವಗಳ ಹಿನ್ನೆಲೆಯಲ್ಲಿ ಈ ಬಾರಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಜಪೂತ ಕಾಲನಿಯಿಂದ ಹೊಸ ಸಂಪರ್ಕ ರಸ್ತೆ ಮಾಡಲಾಗಿದೆ. ಗಣ್ಯರ ಹಾಗೂ ಪಾಸುದಾರರ ವಾಹನಗಳ ನಿಲುಗಡೆಗೆ ಖಾಲಾ ಬುರುಜ್ ಪ್ರದೇಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಗರದಿಂದ ಕೋಟೆಗೆ ಸಂಪರ್ಕ ಕಲ್ಪಿಸುವ ಟಸ್ಕರ ರಸ್ತೆಯ ಅಗಲೀಕರಣ ಮಾಡಲಾಗುತ್ತಿದೆ. ಇದೇ ರೀತಿ ಚೌಬಾರಾದಿಂದ ಕೋಟೆಯವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದ್ದು, ಚರಂಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ಜನವರಿ 27, 28, ಮತ್ತು 29 ರಂದು ಬೀದರ್ ಉತ್ಸವ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)