ರಾಮಲಿಂಗರಾಜು ಬಂಧನಕ್ಕೆ ಹೆಚ್ಚಿದ ಒತ್ತಡ
ಹೈದರಾಬಾದ್, ಜ. 9 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅವರನ್ನು ಬಂಧಿಸುವಂತೆ ಆಂಧ್ರಪ್ರದೇಶ ಸರ್ಕಾರದ ಮೇಲೆ ಭಾರಿ ಒತ್ತಡ ಶುರುವಾಗಿದೆ. ಅನಾಮತ್ತು ಏಳು ಸಾವಿರ ಕೋಟಿ ರುಪಾಯಿಗಳನ್ನು ಮಂಗಮಾಯ ಮಾಡಿರುವ ಗೋಲ್ ಮಾಲ್ ರಾಜುನನ್ನು ಕೂಡಲೇ ಬಂಧಿಸುವಂತೆ ಷೇರುದಾರರು ಸೇರಿ ಸಾರ್ವಜನಿಕರು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ.
ಜನವರಿ 7 ರಂದು ರಾಮಲಿಂಗರಾಜು ಏಳು ಸಾವಿರ ಕೋಟಿ ರುಪಾಯಿಗಳ ಅವ್ಯವಹಾರದ ತಪ್ಪೊಪ್ಪಿಗೆ ಹಾಗೂ ರಾಜೀನಾಮೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮುಂಬೈ ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಸತ್ಯಂ ಷೇರುಗಳು ತೀವ್ರ ಇಳಿಮುಖ ಕಂಡು ಪಾತಾಳ ಸೇರಿತ್ತು. ಸಾವಿರಾರು ಸಂಖ್ಯೆಯ ಸತ್ಯಂ ಷೇರುದಾರರು ಅಪಾರ ಪ್ರಮಾಣದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದರು. ಕಂಪನಿಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಲಿಂಗರಾಜು ವಿರುದ್ಧ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಜನಸಾಮಾನ್ಯರ ಹಣವನ್ನು ನುಂಗಿ ಹಾಕಿದ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಂಧ್ರಪ್ರದೇಶ ಸರ್ಕಾರದ ಮೇಲೆ ತೀವ್ರ ಒತ್ತಡ ಹೆಚ್ಚಿದೆ.
(ದಟ್ಸ್ ಕನ್ನಡ ವಾರ್ತೆ)
ಸತ್ಯಂ ನ 10 ಸಾವಿರ ನೌಕರರಿಗೆ ಪಿಂಕ್ ಸ್ಲಿಪ್?












Click it and Unblock the Notifications