ಬಂಗಾರಪ್ಪ ರೀ ಎಂಟ್ರಿಗೆ ಮೊಯ್ಲಿ ಅಡ್ಡಗಾಲು
ನವದೆಹಲಿ, ಜ. 6 : ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕೆ ಕಾಂಗ್ರೆಸ್ ಪಕ್ಷದಿಂದ ಅಪಸ್ವರ ಕೇಳಿಬರತೊಡಗಿವೆ. ಪಕ್ಷದಲ್ಲಿ ಶಾಶ್ವತವಾಗಿ ಉಳಿಯುವುದಾದರೆ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬರಲಿ, ಇಲ್ಲವಾದರೆ ಹೊರಗೆ ಇರಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ತಾಕೀತು ಮಾಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಂಗಾರಪ್ಪ ಪಕ್ಷ ಬದಲಾವಣೆ ಮಾಡಿದ ಸಂದರ್ಭದಲ್ಲಿ ತುಂಬಾ ನಷ್ಟ ಅನುಭವಿಸಿತ್ತು ಎಂದರು. ಬಂಗಾರಪ್ಪ ಮೂಲ ಕಾಂಗ್ರೆಸ್ ವ್ಯಕ್ತಿ. ಅವರ ಬಗ್ಗೆ ಅಪಾರ ಗೌರವವಿದೆ. ಆದರೆ, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮತ್ತೆ ನಾವು ಬಲವಾದ ಪೆಟ್ಟು ತಿನ್ನಲು ತಯಾರಿಲ್ಲ ಎಂದರು.
ಈಗಾಗಲೇ ಅನ್ಯ ಪಕ್ಷಗಳಿಂದ ವಲಸೆ ಬಂದಿರುವ ಮುಖಂಡರಿಂದ ಕಾಂಗ್ರೆಸ್ ಗೆ ಭಾರಿ ಹಾನಿಯಾಗಿರುವುದನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಈ ಕಾರಣದಿಂದ ಬಂಗಾರಪ್ಪ ಅವರು ಬರಲಿ ಆದರೆ, ಆಯಾರಾಂ ಗಯಾರಂ ಸಂಸ್ಕೃತಿಯನ್ನು ಕೈಬಿಡಲಿ ಎಂದು ಮೊಯ್ಲಿ ಹೇಳಿದ್ದಾರೆ. ಇತ್ತೀಚೆಗೆ ಜನಾರ್ದನ ಪೂಜಾರಿ ಕೂಡ ಅಪಸ್ವರ ಎತ್ತಿದ್ದರು. ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದರೆ ಆಗುವ ಲಾಭ ಕಡಿಮೆ ಎಂದು ಹೇಳಿದ್ದರು.
ಕಳೆದ ಒಂದು ವಾರದಿಂದ ಬಂಗಾರಪ್ಪ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸೋನಿಯಾ ಗಾಂಧಿ ಭೇಟಿಗೆ ಜಾತಕ ಪಕ್ಷಿಯಂತೆ ಕಾಯತೊಡಗಿದ್ದಾರೆ. ಸೋನಿಯಾ ಗಾಂಧಿ ಅವರು ಬಂಗಾರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಂಡಲ್ಲಿ ಆಗುವ ಲಾಭ ನಷ್ಟದ ಬಗ್ಗೆ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. 2005ರಲ್ಲಿ ಬಂಗಾರಪ್ಪ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು. ಆಗ ಸೋನಿಯಾ ಗಾಂಧಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಬಂಗಾರಪ್ಪ, ವಿದೇಶಿ ಮೂಲದ ಮಹಿಳೆ ಭಾರತದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುವುದು ಬೇಡ ಎಂದು ಹೇಳಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications