ಐಟಿಗಳ ಬೆದರಿಕೆ ಪತ್ರ ಭೇದಿಸಿದ ಪೊಲೀಸರು
ಬೆಂಗಳೂರು, ಡಿ. 5 : ಕಳೆದ ಕೆಲವು ದಿನಗಳಿಂದ ಪ್ರಮುಖ ಐಟಿ ಕಂಪನಿಗಳಿಗೆ ಬರುತ್ತಿದ್ದ ಸ್ಫೋಟಿಸುವ ಬೆದರಿಕೆ ಇಮೇಲ್ ಪತ್ರ ನಗರದ ಸೈಬರ್ ಕೆಫೆಯಿಂದ ಬಂದಿರುವುದನ್ನು ಪತ್ತೆ ಹಚ್ಚಲಾಗಿದೆ. ಬೆದರಿಕೆ ಕರೆಯ ಬೆನ್ನು ಹತ್ತಿದ ಬೆಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಇಮೇಲ್ ಬಂದಿರುವ ಸೈಬರ್ ಕೇಂದ್ರವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಕಾಮರಾಜ್ ರಸ್ತೆ ಸುಬ್ಬಣ್ಣ ಶೆಟ್ಟಿ ಗಾರ್ಡನ್ ನಲ್ಲಿರುವ ನೆಟ್ ಸ್ಪಾಟ್ ಎಂಬ ಸೈಬರ್ ಕೇಂದ್ರದಿಂದ ಸ್ಫೋಟ ಬೆದರಿಕೆಯ ಇಮೇಲ್ ಗಳನ್ನು ನಗರದ ಪ್ರಮುಖ ಐಟಿ ಕಂಪನಿಗಳಿಗೆ ರವಾನಿಸಲಾಗಿದೆ. ಆದರೆ, ಇಮೇಲ್ ರವಾನಿಸಿದವರು ಯಾರು ಎಂಬುದು ಪೊಲೀಸರಿಗೆ ತಿಳಿದು ಬಂದಿಲ್ಲ. ಸೈಬರ್ ಕೇಂದ್ರದಲ್ಲಿ ಇಂಟರ್ನೆಟ್ ಉಪಯೋಗಿಸುವವರ ಹೆಸರು ಹಾಗೂ ಮೊಬೈಲ್ ನಂಬರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೂ ಈ ದುಷ್ಕತ್ಯ ನಡೆಸಿದವರು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳನ್ನು ಇನ್ನೆರಡು ದಿನಗಳಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈ ಭಯೋತ್ಪಾದನೆ ನಂತರ ಸುಮಾರು 14 ರಿಂದ 16 ಸಲ ಇಂತಹ ಬೆದರಿಕೆ ಪತ್ರ ಹಾಗೂ ಕೆರೆಗಳು ನಗರದ ಇನ್ಫೋಸಿಸ್, ವಿಪ್ರೋ, ಅಕ್ಸೆಂಚರ್, ಕ್ಯಾಪ್ ಜೆಮಿನಿ ಸೇರಿದಂತೆ ಹಲವಾರು ಕಂಪನಿಗಳು ಬಂದಿದ್ದವು. ಮಾರ್ಚ್ 13 ಹಾಗೂ 23 ಐಟಿ ಕಂಪನಿಗಳು ಹಾಗೂ ಬೆಂಗಳೂರಿನಲ್ಲಿ ಭಯೋತ್ಪಾದನೆ ನಡೆಸುವುದಾಗಿ ಬೆದರಿಕೆ ಪತ್ರದಲ್ಲಿ ಬರೆಯಲಾಗಿತ್ತು.
ಅಮೆರಿಕದಿಂದ ಈ ಇ ಮೇಲ್ ರವಾನಿಸಲಾಗಿದೆ. ಶನಿವಾರ ಬೆಳಗ್ಗೆ ಕಂಪನಿಗಳ ಇನ್ ಬಾಕ್ಸ್ ನಲ್ಲಿ ಈ ಬೆದರಿಕೆ ಇರುವ ಇಮೇಲ್ ಪತ್ರ ಕಂಪನಿಯ ಮುಖ್ಯಸ್ಥರ ಕೈಸೇರಿದೆ. ಬೆಂಗಳೂರು ನಗರದ ವಿವಿಧೆಡೆ ಅತೀ ಶೀಘ್ರದಲ್ಲಿ ಭಯೋತ್ಪಾದನೆ ನಡೆಸುವುದಾಗಿ ಇಮೇಲ್ ಪತ್ರದಲ್ಲಿ ಬರೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಗೋಪಾಲ್ ಬಿ ಹೂಸೂರು ಭಾನುವಾರ ಖಚಿತಪಡಿಸಿದ್ದರು. ನಾವು ಈಗಾಗಲೇ ಕಂಪನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇವೆ. ಬೆದರಿಕೆಯ ಹಿನ್ನೆಲೆಯಲ್ಲಿ ಖಾಸಗಿ ಭದ್ರತೆ ಹಾಗೂ ಪೊಲೀಸ್ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೊಸೂರು ಹೇಳಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಐಟಿ
ಕಂಪೆನಿಗಳಿಗೆ
ಉಗ್ರರಿಂದ
ಬೆದರಿಕೆ
ಪತ್ರ