ಮೂರನೇ ದಿನಕ್ಕೆ ಕಾಲಿಟ್ಟ ಟ್ಯಾಂಕರ್ ಮುಷ್ಕರ
ಬೆಂಗಳೂರು, ಜ.3: ಸಾಗಣೆ ಶುಲ್ಕಕ್ಕೆ ಸಂಬಂಧಿಸಿದಂತೆ ತೈಲ ಕಂಪನಿಗಳು ಮತ್ತು ಅನಿಲ ಟ್ಯಾಂಕರ್ ಮಾಲೀಕರ ನಡುವಿನ ಮಾತುಕತೆ ವಿಫಲವಾಗಿದ್ದು ಮುಷ್ಕರ 3ನೇ ದಿನಕ್ಕೆ ಕಾಲಿರಿಸಿದೆ. ಅನಿಲ ಟ್ಯಾಂಕರ್ ಗಳ ಮುಷ್ಕರ ಹೀಗೆ ಮುಂದುವರಿದರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆ ಅನಿಲಕ್ಕೆ ಪರದಾಡಬೇಕಾಗುತ್ತದೆ.
ಸುಮಾರು 3,700 ಅನಿಲ ಟ್ಯಾಂಕರ್ ಗಳು ಸಂಚಾರವನ್ನು ಸ್ಥಗಿತಗೊಳಿಸಿವೆ. ದಕ್ಷಿಣ ಭಾರತ ಟ್ಯಾಂಕರ್ ಮಾಲೀಕರು ಮಾತ್ರ ಮುಷ್ಕರದಲ್ಲಿ ನಿರತರಾಗಿದ್ದು,ಸಮಸ್ಯೆ ಬಗೆಹರಿಯದಿದ್ದರೆ ಜನವರಿ 5 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲು ನಿರ್ಧರಿಸಲಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅನಿಲ ಸಂಗ್ರಹಣೆ ಖಾಲಿಯಾಗಿದೆ. ಮುಷ್ಕರ ಮುಂದುವರಿದರೆ ರಾಜ್ಯದ ಇತರಜಿಲ್ಲೆಗಳಿಗೂ ಅಡುಗೆ ಅನಿಲದ ಬಿಸಿ ತಟ್ಟಲಿದೆ. ಮುಷ್ಕರ ಬಿಸಿಆಟೋ ಪ್ರಯಾಣ ಹಾಗೂ ಹೋಟೆಲ್ ಉದ್ಯಮದ ಮೇಲೆ ತಟ್ಟಲಿದೆ.
ಜ.5ರ ಮುಷ್ಕರಕ್ಕೆ ನಿರಾಕರಣೆ: ಜ.5ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಸಾಗಣೆ ವಾಹನಗಳ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘಗಳ ಒಕ್ಕೂಟ ತಿಳಿಸಿದೆ. ಡೀಸೆಲ್ ಬೆಲೆ ಇಳಿಕೆ, ಟೋಲ್ ತೆರಿಗೆ ರದ್ದು ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಲಾರಿ ಮಾಲೀಕರು ಮುಷ್ಕರದಲ್ಲಿ ಭಾಗಿಯಾಗುತ್ತಿಲ್ಲ ಎಂದು ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)