ಸಿದ್ದರಾಮಯ್ಯ ಕುರಿತು ಕುಮಾರಸ್ವಾಮಿ ಲೇವಡಿ
ಬೆಂಗಳೂರು, ಜ. 3 : "ಹೊಸ ಪಕ್ಷ ಕಟ್ಟಲು ಸನ್ನದ್ಧರಾಗಿರುವ ಸಿದ್ದರಾಮಯ್ಯ ಜಾತ್ಯತೀತ ಜನತಾದಳಕ್ಕೆ ಅಪ್ರಸ್ತುತ. ಅತಂತ್ರರಾಗಿರುವ ಅವರಿಗೆ ಅವರ ಪಕ್ಷ ಯಾವುದೆಂದು ಅವರಿಗೇ ಗೊತ್ತಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಕಳೆದ ತಿಂಗಳು ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡದೆ ರಾಜ್ಯದ ನಾಯಕರ ಆಕ್ರೋಶಕ್ಕೆ ತುತ್ತಾಗಿರುವ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟುವುದು ಹೆಚ್ಚುಕಡಿಮೆ ನಿಶ್ಚಿತವಾಗಿದೆ. ಸಿದ್ದರಾಮಯ್ಯನವರು ಜನವರಿ 17ರಂದು ಕೊಪ್ಪಳದಲ್ಲಿ ಶೋಷಿತ ವರ್ಗದವರಿಗಾಗಿ ಬೃಹತ್ ಸಭೆಯನ್ನು ನಡೆಸುತ್ತಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಅವರು ನಡೆಸುತ್ತಿರುವ ಸಮಾವೇಶ ಅಹಿಂದಕ್ಕೆ ಪರ್ಯಾಯವಲ್ಲ. ಜನತಾದಳ ಹಿಂದುಳಿದ ವರ್ಗದವರಿಗಾಗಿ ಹಿಂದಿನಿಂದಲೂ ಶ್ರಮಿಸುತ್ತಿದೆ, ಮುಂದೂ ಕೆಲಸ ಮಾಡುತ್ತದೆ. ಸಿದ್ದರಾಮಯ್ಯನವರ ಸಮಾವೇಶದಿಂದ ನಮ್ಮ ಕಾರ್ಯಕ್ಕೇನು ಕುಂದುಂಟಾಗುವುದಿಲ್ಲ ಎಂದರು.
ಉಪಚುನಾವಣೆಯಲ್ಲಿ ಪ್ರಚಾರ ಕಾರ್ಯ ಭಾರೀ ಕೈಕೊಟ್ಟಿದ್ದರಿಂದ 8 ಸ್ಥಾನಗಳಲ್ಲಿ ಒಂದೂ ಗೆಲ್ಲಲು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ. ಶೂನ್ಯ ಸಂಪಾದನೆಗಾಗಿ ಸಿದ್ದರಾಮಯ್ಯನವರ ಮೇಲೇ ಗೂಬೆ ಕೂರಿಸಲಾಗುತ್ತಿದೆ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅನ್ನುವಂತೆ ಸಿದ್ದರಾಮಯ್ಯ ಹೊಸ ಪಕ್ಷ ರಚಿಸುವತ್ತ ಚಿತ್ತ ಹರಿಸಿದ್ದಾರೆ. ಇನ್ನು ಅವರ ದಾರಿ ಅವರು ನೋಡಿಕೊಳ್ಳುವುದು ಉತ್ತಮ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕೂಡ ಖಾರವಾಗಿ ಹೇಳಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಜನವರಿ ಅಂತ್ಯಕ್ಕೆ ಸಿದ್ದು ಹೊಸ ಪಕ್ಷ ಶುರು?











Click it and Unblock the Notifications